ADVERTISEMENT

ಹೊಸಪೇಟೆ| ಕಂಬಾರರ ಚಿಂತನೆ ಸಾಂಸ್ಕೃತಿಕ ಪ್ರತಿಧ್ವನಿ: ಸಿದ್ಧಲಿಂಗೇಶ ರಂಗಣ್ಣನವರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 4:55 IST
Last Updated 11 ಜನವರಿ 2026, 4:55 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ವಿದ್ಯಾರ್ಥಿಗಳಿಂದ  ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನಗೊಂಡಿತು  –ಪ್ರಜಾವಾಣಿ ಚಿತ್ರ
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ವಿದ್ಯಾರ್ಥಿಗಳಿಂದ  ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನಗೊಂಡಿತು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಕುವೆಂಪು ಅವರ ಸಾಹಿತ್ಯ ಹಾಗೂ ಗಿರೀಶ್ ಕಾರ್ನಾಡ್ ಅವರ `ನಾಗಮಂಡಲ' ನಾಟಕದಲ್ಲಿನ ಹೆಣ್ಣಿನ ಭಾವನೆಗಳು, ಸೆಳೆತಗಳನ್ನು ಹೋಲುವಂತೆ `ಜೋಕುಮಾರ ಸ್ವಾಮಿ'ಯಲ್ಲಿಯೂ ಮಾನವೀಯ ಮೌಲ್ಯಗಳು ಜೀವಂತವಾಗಿ ಮೂಡಿಬಂದಿವೆ, ಕಂಬಾರರ ಚಿಂತನೆ ನಮ್ಮ ನಾಡಿನ ಸಾಂಸ್ಕೃತಿಕ ಪ್ರತಿಧ್ವನಿಯಂತೆಯೇ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ಹೇಳಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಸ್ಥಾಪಕ ಕುಲಪತಿ ಪ್ರೊ.ಚಂದ್ರಶೇಖರ ಕಂಬಾರ ಅವರ 89ನೇ ಜನ್ಮದಿನದ ಪ್ರಯುಕ್ತ ಅವರ ‘ಜೋಕುಮಾರಸ್ವಾಮಿ' ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ ವೇಳೆ ಅವರು ಈ ವಿಷಯ ತಿಳಿಸಿದರು.

‘ಉಳುವವನೇ ಭೂಮಿಯ ಒಡೆಯ' ಎಂಬ ಸಾಮಾಜಿಕ ಸಂದೇಶದ ಜೊತೆಗೆ, ಸಮಾಜದಲ್ಲಿ ಪ್ರೀತಿಗೆ ಪಾತ್ರನಾದ ವ್ಯಕ್ತಿ ಯಾಕೆ ಗಂಡನಾಗಿರಬಾರದು ಎಂಬ ಆಳವಾದ ತಾತ್ಪರ್ಯವನ್ನು ಕಂಬಾರರು ಜನಸಾಮಾನ್ಯರಿಗೆ ಅರ್ಥವಾಗುವ ಹಳ್ಳಿ ಸೊಗಡಿನ ಭಾಷಾ ಶೈಲಿಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ’ ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಮಾತನಾಡಿ, ನಾಟಕದಲ್ಲಿ ಸಣ್ಣದು-ದೊಡ್ಡದು ಎನ್ನುವ ಪಾತ್ರಗಳಿಲ್ಲ; ಪ್ರತಿಯೊಂದು ಪಾತ್ರವೂ ತನ್ನ ಜೀವಂತಿಕೆಯಿಂದ ನಾಟಕದ ಸಂದೇಶವನ್ನು ಪ್ರೇಕ್ಷಕರಿಗೆ ತಲುಪಿಸಬೇಕು ಎಂದರು.

ಹಿರಿಯ ರಂಗಕರ್ಮಿ ಸಿ.ಟಿ. ಬ್ರಹ್ಮಾಚಾರ್ ಅವರ ನಿರ್ದೇಶನ, ಜಯರಾಮ ಕೆ.ಎಚ್. ಅವರ ರಾಗ ಸಂಯೋಜನೆ,  ಪ್ರೊ.ವೀರೇಶ ಬಡಿಗೇರ ಅವರ ಸಂಗೀತ ನಿರ್ದೇಶನ, ಸಂಗೀತ ವಿಭಾಗದ ವಿದ್ಯಾರ್ಥಿಗಳು ಧ್ವನಿ ಮತ್ತು ಹಿನ್ನೆಲೆ ಗಾಯನ ಸೇರಿದಂತೆ ಈ ನಾಟಕ ಪ್ರದರ್ಶನವು ಪ್ರೇಕ್ಷಕರ ಮನ ಸೆಳೆಯಿತು.

ಕುಲಸಚಿವ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿ, ಲಲಿತಕಲಾ ವಿಭಾಗದ ಡೀನ್‌ ಪ್ರೊ.ಶಿವಾನಂದ ವಿರಕ್ತಮಠ, ಆಂತರಿಕ ಗುಣಮಟ್ಟ ಭರವಸೆ ಕೋಶದ ನಿರ್ದೇಶಕ ಪ್ರೊ.ಮಾಧವ ಪೆರಾಜೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.