ಹೊಸಪೇಟೆ (ವಿಜಯನಗರ): ಆನೆಗುಂದಿ ಮೂಲ ಸಂಸ್ಥಾನದ ಹೊಸಪೇಟೆಯ ಚಿಂತಾಮಣಿ ಮಠದ ನೂತನ ಪೀಠಾಧಿಪತಿಗಳಾಗಿ ಶಿವಾನಂದಭಾರತೀ ಚಿಂತಾಮಣಿ ಮಹಾಸ್ವಾಮಿಗಳು ಗುರುವಾರ ಪೀಠಾರೋಹಣ ಮಾಡಿದರು.
ಹಂಪಿಯ ತುಂಗಭದ್ರ ನದಿತಟದಲ್ಲಿ ಧಾರ್ಮಿಕ ವಿಧಿ ವಿಧಾನದಲ್ಲಿ ನೂತನ ಶ್ರೀಗಳಿಗೆ ನೆಲಮಾವು ಮಠದ ಜಗದ್ಗುರು ಮಾಧವಾನಂದ ಶ್ರೀಗಳು ಪೀಠಾಧಿಕಾರ ರುದ್ರಾಕ್ಷಿ ಕಿರೀಟಧಾರಣೆ ಮಾಡುವ ಮೂಲಕ 31ನೇ ಪೀಠಾಧಿಪತಿಯನ್ನಾಗಿ ಮಾಡಲಾಯಿತು.
ಧರ್ಮಪ್ರಚಾರಕ್ಕೆ ಮುಂದಾಗಿ: ‘ಸಕಲ ಜೀವರಾಶಿಗಳಿಗೆ ಶ್ರೇಯಸ್ಸು ಬಯಸುವ ಧರ್ಮ ಪ್ರಚಾರದ ಮೂಲಕ ಜಗತ್ತಿಗೆ ಒಳಿತನ್ನು ಬಯಸುವ ಮಹತ್ವದ ಹೊಣೆಯನ್ನು ನಿರ್ವಹಿಸಿ’ ಎಂದು ಮಾಧವಾನಂದ ಶ್ರೀ ಆಶಿಸಿದರು.
‘ಎಲ್ಲವನ್ನೂ ತ್ಯಾಗ ಮಾಡಿದ ಸನ್ಯಾಸಿಗೇ ಮಠ ಇರುವುದಲ್ಲ, ಸಮಾಜದ ಎಲ್ಲರಿಗೂ ಇದು ಸಲ್ಲುತ್ತದೆ. ಸಮಾಜದ ಆಗುಹೋಗುಗಳಿಗೂ ಅನುವಾಗುವಂತೆ ಮಾರ್ಗದರ್ಶನ ಮಾಡಲು ಭಕ್ತರಿಗೆ ಮಠದ ಅವಶ್ಯಕತೆ ಇದ್ದು, ಎಲ್ಲ ಸಮಾಜಗಳು ಶ್ರೀ ಮಠವನ್ನು ಉಪಯೋಗಿಸಿಕೊಳ್ಳಬೇಕು’ ಎಂದು ನೂತನ ಪೀಠಾಧಿಪತಿ ಶಿವಾನಂದಭಾರತೀ ಚಿಂತಾಮಣಿ ಶ್ರೀಗಳು ಹೇಳಿದರು.
ಹಂಪಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ನಂತರ ಹೊಸಪೇಟೆ ಪುರಪ್ರವೇಶಮಾಡಿದ ಶ್ರೀಗಳನ್ನು ಭವ್ಯ ಮೆರವಣಿಗೆಯ ಮೂಲಕ ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಭೆಯಲ್ಲಿ ವಿವಿಧ ಸಮಾಜಗಳ ಗಣ್ಯರನ್ನು ಗೌರವಿಸಲಾಯಿತು.
ವಾಲ್ಮೀಕಿ ಸಮಾಜ, ದಲಿತ ಸಮಾಜ, ಮುಸ್ಲಿಂ ಸಮಾಜ ಸೇರಿದಂತೆ ವಿವಿಧ ಸಮಾಜದ ವಿವಿಧ ಆಯಾಮಗಳಲ್ಲಿ ಕಾರ್ಯನಿರ್ವಹಿಸಿದ ಗಣ್ಯರು, ಕಂದಾಯ ಇಲಾಖೆಯ ಪರವಾಗಿ ತಹಶೀಲ್ದಾರ್ ವಿಶ್ವಜೀತ ಮೆಹತಾ, ಪೊಲೀಸ್ ಇಲಾಖೆಯ ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳು, ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ದಿವಾಕರ, ವೇಣುಗೋಪಾಲ ವೈದ್ಯ, ಬ್ರಾಹ್ಮಣ ಮಹಾಸಭಾದ ಸದಸ್ಯ ಎಚ್.ಉಮೇಶ ಹಿರಿಯರಾದ ಡಾ.ಹನುಮಂತರಾವ್, ವಕೀಲರಾದ ವೆಂಕಟರಾವ್, ಸತ್ಯನಾರಾಯಣ ಶಾಸ್ತ್ರಿ, ರಾಮಚಂದ್ರಗೌಡ, ಅನಂತಪದ್ಮನಾಭ, ಚಂದ್ರಕಾಂತ ಕಾಮತ್, ಅನಿಲ ಜೋಶಿ, ಎಚ್.ಪಿ.ಕಲ್ಲಂಭಟ್, ಹಿರಿಯ ಪುರೋಹಿತರಾದ ಮೋಹನ ಚಿಕ್ಕಭಟ್ ಜೋಶಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.