ಹೊಸಪೇಟೆ (ವಿಜಯನಗರ): ಪುನರ್ವಸತಿ ಕಲ್ಪಿತ ದೇವದಾಸಿಯರ ಮಕ್ಕಳು ಮದುವೆ ಆಗುವವರೆಗೆ ಸರ್ಕಾರ ಅವರಿಗೆ ಪ್ರೋತ್ಸಾಹ ಧನ ನೀಡಬೇಕೆಂದು ಜಿಲ್ಲಾ ದಲಿತ ಹಕ್ಕುಗಳ ಸಮಿತಿ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಆಗ್ರಹಿಸಿವೆ.
ಈ ಸಂಬಂಧ ಎರಡೂ ಸಂಘಟನೆಗಳ ಮುಖಂಡರು ಸೋಮವಾರ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ತೇಜ್ ಆನಂದ್ ರೆಡ್ಡಿ ವಿ. ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಸಂವಿಧಾನ ಜಾರಿಗೆ ಬಂದು 73 ವರ್ಷ ಕಳೆದರೂ ಜಾತಿ ದೌರ್ಜನ್ಯ-ಅಸಮಾನತೆ-ಅಸ್ಪೃಶ್ಯತೆ ಇನ್ನೂ ಜೀವಂತವಾಗಿವೆ. ಅಂತರ್ಜಾತಿ ವಿವಾಹವಾದ ದಂಪತಿಗೆ, ಪುನರ್ವಸತಿ ಕಲ್ಪಿತ ದೇವದಾಸಿ ಮಕ್ಕಳ ವಿವಾಹಿತ ದಂಪತಿಗೆ, ಸರ್ಕಾರ ತುರ್ತಾಗಿ ಪ್ರೋತ್ಸಾಹಧನ ಒದಗಿಸಬೇಕು ಎಂದು ಆಗ್ರಹಿಸಿದರು.
ಕೆಳಜಾತಿ ಸಮುದಾಯದ ಮಹಿಳೆಯರನ್ನು ದೇವದಾಸಿ ಎಂಬ ಅನಿಷ್ಠ ಪದ್ಧತಿಗೆ ಇಂದಿಗೂ ಒಳಗಾಗುವಂತೆ ಮಾಡಲಾಗುತ್ತಿದೆ. ಹಲವು ಬಾರಿ ಪ್ರೋತ್ಸಾಹ ಧನ ಬಂದಿದ್ದರೂ ಸಹ ₹10 ರಿಂದ ₹50 ಸಾವಿರದ ವರೆಗೆ ದೋಚುತ್ತಿರುವುದು ಸಂಘಟನೆಯ ಗಮನಕ್ಕೆ ಬಂದಿದೆ ಎಂದು ಆರೋಪಿಸಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ವಿ.ಸ್ವಾಮಿ, ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಮರಡಿ ಜಂಬಯ್ಯ ನಾಯಕ, ಮುಖಂಡರಾದ ಮಹಮ್ಮದ್ ಖಾಲೀದ್, ದುರುಗಪ್ಪ, ಮಂಜು, ಖಾಜಾಪೀರ್, ಪಿ. ಹುಲುಗಪ್ಪ, ಸೌಭಾಗ್ಯ, ಜಿ.ಎಸ್.ಸುಕನ್ಯ ಇತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.