ಹೊಸಪೇಟೆ (ವಿಜಯನಗರ):‘ಮೋದಿ@20’ ಪುಸ್ತಕ ಬಿಡುಗಡೆ ಸಮಾರಂಭ ಶುಕ್ರವಾರ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯಿತು.
‘ಮೋದಿಯವರ ದೂರದೃಷ್ಟಿ, ಆಲೋಚನೆಗಳಿಂದ ಭಾರತವು 2030ರಲ್ಲಿ ಆರ್ಥಿಕ ಪ್ರಗತಿಯಲ್ಲಿ ವಿಶ್ವದ ಉನ್ನತ ಸ್ಥಾನದಲ್ಲಿರುತ್ತದೆ. ಯುವಜನತೆಯ ಸಹಕಾರದಿಂದ ಇದು ಸಾಧ್ಯ. ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮೋದಿಯವರ ಸುಸ್ಥಿರ ಆಡಳಿತ ಶೈಲಿಯನ್ನು ಇಂದಿನ ಯುವಜನ ಒಪ್ಪುತ್ತಿದೆ’ ಎಂದು ಆರ್ಥಿಕ ತಜ್ಞ ವಿಶ್ವನಾಥ ಭಟ್ ಮುಖ್ಯ ಭಾಷಣದಲ್ಲಿ ತಿಳಿಸಿದರು.
‘ಮೋದಿ@20’ ಪುಸ್ತಕದಲ್ಲಿ ಒಟ್ಟು 21 ಅಧ್ಯಾಯಗಳಿವೆ. ವಿವಿಧ ಕ್ಷೇತ್ರದ ಸಾಧಕ ವಿಷಯ ತಜ್ಞರು ಬರೆದಿದ್ದಾರೆ. ಅವರ ಆಡಳಿತ ವೈಖರಿಗೆ ಒರೆಗಲ್ಲು ಹಚ್ಚುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.
ಸಂಸದ ವೈ. ದೇವೇಂದ್ರಪ್ಪ ಉದ್ಘಾಟಿಸಿ, ನರೇಂದ್ರ ಮೋದಿ ಒಬ್ಬ ಕ್ರಿಯಾಶೀಲ ವ್ಯಕ್ತಿ. ಸಮಯವನ್ನು ವ್ಯರ್ಥ ಮಾಡದೆ ಆಡಳಿತ ಯಂತ್ರವನ್ನು ಸದಾ ಚಟುವಟಿಕೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು.
ಕುಲಪತಿ ಪ್ರೊ. ಸ.ಚಿ. ರಮೇಶ, ನರೇಂದ್ರ ಮೋದಿಯವರು ತಮ್ಮ ಬದುಕಿನಲ್ಲಿ ಸಾಕಷ್ಟು ನೋವುಗಳನ್ನು ಅನುಭವಿಸಿರುವುದರಿಂದ ಪ್ರಧಾನಿ ಮಂತ್ರಿಯಂಥಹ ಉನ್ನತ ಹುದ್ದೆಯಲ್ಲಿದ್ದಾರೆ. ಇಂತಹ ವಿಷಯಗಳು ಯುವಜನಾಂಗಕ್ಕೆ ಸ್ಫೂರ್ತಿದಾಯಕ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ. ಕುಲಸಚಿವ ಪ್ರೊ. ಎ ಸುಬ್ಬಣ್ಣ ರೈ, ಮುಖಂಡರಾದ ನೇಮಿರಾಜ ನಾಯ್ಕ, ದೀನಾ ಮಂಜುನಾಥ, ಸಿದ್ದೇಶ ಯಾದವ, ಕೆ.ಎಸ್. ರಾಘವೇಂದ್ರ, ಡಿ. ವೀರಣಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.