ಹೊಸಪೇಟೆ (ವಿಜಯನಗರ): ‘ನ್ಯಾಯಾಂಗದಿಂದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವುದು ಮತ್ತು ಅದರ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಉಚಿತ ಕಾನೂನು ಸೇವೆ ಸಮಿತಿ ರಚಿಸಲಾಗಿದೆ. ಎಲ್ಲರಿಗೂ ಕಾನೂನಿನ ತಿಳಿವಳಿಕೆ ಅಗತ್ಯ’ ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶುಭವೀರ ಜೈನ್ ಬಿ. ತಿಳಿಸಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಸೋಮವಾರ ತಾಲ್ಲೂಕಿನ ಕಡ್ಡಿರಾಂಪುರದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು–ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ದೇಶದಲ್ಲಿ ಪ್ರತಿಯೊಂದಕ್ಕೂ ಒಂದು ಕಾನೂನು ಇದೆ. ಆದರೆ, ಹೆಚ್ಚಿನವರಿಗೆ ಅದರ ಬಗ್ಗೆ ತಿಳಿವಳಿಕೆ ಇಲ್ಲ. ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಿ, ಕಾನೂನಿನ ಕುರಿತು ಎಲ್ಲರಿಗೂ ತಿಳಿಸುವುದು ಇದರ ಮುಖ್ಯ ಉದ್ದೇಶ. ಜನ ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.
ವಕೀಲ ವಿ. ಅಂಬಣ್ಣಗೌಡ ಮಾತನಾಡಿ, ‘ಸಾಮಾನ್ಯ ಜನರು ಕಾನೂನಿನ ಸೌಲಭ್ಯಗಳನ್ನು ಆಯಾ ತಾಲ್ಲೂಕಿನ ನ್ಯಾಯಾಲಯದಲ್ಲಿ ಪಡೆಯಬಹುದು’ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪದ್ಮಪ್ರಸಾದ್, ಕಿಶನ್ ಬಿ. ಮೂಡಲಗಿ, ದರ್ಶಿನಿ, ಶಿವಪ್ರಕಾಶ್, ಮಹಾರಾಜ ರವಿ, ಕರ್ನಾಟಕ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಗೌಡ, ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ ವಿ, ಗ್ರಾಮ ಪಂಚಾಯಿತಿ ಸದಸ್ಯರಾದ ರೂಪ, ಹನುಮಂತ, ಜಲಜಾಕ್ಷಿ, ಮುಖಂಡರಾದ ಕೆ. ಉದ್ದಾನಪ್ಪ, ರವಿ ಕುಲಕರ್ಣಿ, ಪ್ರಶಾಂತ್ ಇದ್ದರು. ಇದೇ ವೇಳೆ ಉಚಿತ ನೇತ್ರ ತಪಾಸಣೆ ಶಿಬಿರ ನಡೆಸಲಾಯಿತು. 15 ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.