ಹೊಸಪೇಟೆ (ವಿಜಯನಗರ): ‘ಜಿಲ್ಲಾಮಟ್ಟದ ರೈತ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮ ಡಿಸೆಂಬರ್ 27ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಗತಿಪರ ರೈತರು, ರೈತ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ವಾಸುದೇವ ಮೇಟಿ ಬಣ) ತಿಳಿಸಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಎ.ಗಾಳೆಪ್ಪ, ‘ಒಟ್ಟು 400 ಮಂದಿಯನ್ನು ಸನ್ಮಾನಿಸಲಾಗುವುದು. ಬೆಳಿಗ್ಗೆ 9ರಿಂದ ವಡಕರಾಯ ದೇವಸ್ಥಾನದಿಂದ ರೈತರ ಹಬ್ಬ ಶೋಭಾಯಾತ್ರೆ ಆರಂಭವಾಗಲಿದೆ. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳ ಮೂಲಕ ರೈತರ ಜೀವನ ಅನಾವರಣ ಮಾಡಲಾಗುತ್ತದೆ’ ಎಂದರು.
‘ರಾಜ್ಯ ಸರ್ಕಾರವೇ ರೈತ ದಿನ ಆಚರಿಸಿದರೆ ಮಾತ್ರ ರೈತರ ಕಷ್ಟಗಳು ಸರ್ಕಾರದ ಅರಿವಿಗೆ ಬರಲು ಸಾಧ್ಯ. ರೈತರ ಸಾಲಮನ್ನಾದಂತಹ ಮಹತ್ವದ ನಿರ್ಧಾರಗಳಿಗೆ ರೈತ ದಿನ ವೇದಿಕೆಯಾಗಬೇಕು’ ಎಂದರು.
ಸಂಘದ ಗೌರವಾಧ್ಯಕ್ಷ ವೆಂಕೋಬಣ್ಣ, ಪ್ರಮುಖರಾದ ಸುರೇಶ, ಪಾರ್ವತಿ, ಪೂಜಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.