ಕೊಟ್ಟೂರು (ವಿಜಯನಗರ): ವಿದ್ಯುತ್ ತಂತಿ ಬೇಲಿಗೆ ಸಿಲುಕಿ ಸಾವಿಗೀಡಾದ ಚಿರತೆಯನ್ನು ಹೊಲದಲ್ಲಿ ಹೂತು ಹಾಕಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ತಾಲ್ಲೂಕಿನ ಚಿರಿಬಿ ಗ್ರಾಮದಲ್ಲಿ ಪತ್ತೆ ಹಚ್ಚಿ, ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಗ್ರಾಮದ ಸುಮೇರ್ಮಲ್ ಎಂಬುವರು ಅವರ ಹೊಲಕ್ಕೆ ವಿದ್ಯುತ್ ತಂತಿ ಬೇಲಿ ಅಳವಡಿಸಿಕೊಂಡಿದ್ದರು.
ವಿದ್ಯುತ್ ತಂತಿಗೆ ಚಿರತೆ ಸಿಲುಕಿ ಸಾವಿಗೀಡಾಗಿದ್ದು, ಬಳಿಕ ಅದನ್ನು ಹೊಲದಲ್ಲಿ ಹೂತು ಹಾಕಿದ್ದಾರೆ ಎಂದು ಗೊತ್ತಾಗಿದೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಅರಣ್ಯ ಇಲಾಖೆಯ ಅಧಿಕಾರಿಗಳು ಸುಮೇರ್ಮಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುಮೇರ್ಮಲ್ ತಲೆಮರೆಸಿಕೊಂಡಿದ್ದಾರೆ. ಚಿರತೆ ಹೂತು ಹಾಕಲು ಸುಮೇರ್ಮಲ್ಗೆ ಸಹಕರಿಸಿದ ರಾಜಪ್ಪ, ಹನುಮಂತ, ಮಲ್ಲೇಶ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ. ಹೊಲದಲ್ಲಿರುವ ಮನೆಯಿಂದ ಚಿರತೆ ಚರ್ಮ ಕೂಡ ವಶಪಡಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.
ಉಪ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಾಬು ಮೇದಾರ್, ವಲಯ ಅರಣ್ಯಾಧಿಕಾರಿ ಬಿ.ಎಸ್. ಮಂಜುನಾಥ, ಉಪವಲಯ ಅರಣ್ಯಾಧಿಕಾರಿ ವೆಂಕಟೇಶ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕುಬೇರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.