ಕಮಲಾಪುರ ಕೆರೆಯಲ್ಲಿ ಮೀನುಗಳ ಸಾವು
ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಹಂಪಿ ಸಮೀಪ ಇರುವ ಐತಿಹಾಸಿಕ ಕಮಲಾಪುರ ಕೆರೆಯಲ್ಲಿ ನೂರಾರು ಮೀನುಗಳು ಸತ್ತಿರುವುದು ಶುಕ್ರವಾರ ಕಾಣಿಸಿದ್ದು, ಸ್ಥಳೀಯರು ಮತ್ತು ಮೀನುಗಾರರು ಆತಂಕಗೊಂಡಿದ್ದಾರೆ.
ಕೆರೆಯ ದಡದಲ್ಲಿ 400ಕ್ಕೂ ಅಧಿಕ ದೊಡ್ಡ ಮೀನುಗಳು ಸತ್ತು ಬಿದ್ದಿರುವುದನ್ನು ಜನರು ಕುತೂಹಲದಿಂದ ನೋಡುತ್ತಿದ್ದು, ಇದಕ್ಕೆ ಕಾರಣ ಏನು ಎಂಬ ಬಗ್ಗೆ ಚರ್ಚಸತೊಡಗಿದ್ದಾರೆ.
ಮಳೆ ನೀರಿನೊಂದಿಗೆ ಕಲುಷಿತ ನೀರು ಸೇರಿಕೊಂಡು ಮೀನುಗಳು ಸತ್ತಿರಬಹುದು, ಕೃಷಿಗೆ ಬಳಸುವ ರಾಸಾಯನಿಕ ನೀರಿನಲ್ಲಿ ಸೇರಿಯೂ ಈ ರೀತಿ ಸಾಮೂಹಿಕ ಸಾವು ಸಂಭವಿಸಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
‘ಕೈಗಾರಿಕೆಗಳು ತುಂಗಭದ್ರಾ ಜಲಾಶಯಕ್ಕೆ ಬಿಡುವ ಕಲುಷಿತ ನೀರಿನಿಂದ ಮತ್ತು ಕಮಲಾಪುರದ ಚರಂಡಿಯ ನೀರಿನಿಂದ ಈ ಮೀನುಗಳ ಮಾರಣಹೋಮ ನಡೆದಿರಬಹುದು, ಸರ್ಕಾರ ಕೆರೆಯನ್ನು ಸ್ವಚ್ಛವಾಗಿ ಇಡುವತ್ತ ಗಮನ ಹರಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ಅಧ್ಯಕ್ಷರೂ ಆಗಿರುವ ಸ್ಥಳೀಯ ನಿವಾಸಿ ಎಚ್.ಜಿ.ಮಲ್ಲಿಕಾರ್ಜುನ ಆಗ್ರಹಿಸಿದ್ದಾರೆ.
ಐತಿಹಾಸಿಕ ಕೆರೆ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಈ ಕೆರೆಯ ನೀರು ನೂರಾರು ಎಕರೆ ಕೃಷಿ ಜಮೀನಿಗೆ ಆಸರೆಯಾಗಿದೆ. ತುಂಗಭದ್ರಾ ಜಲಾಶಯದಿಂದ ಹರಿದು ಬರುವ ರಾಯ ಕಾಲುವೆಯ ನೀರು ಈ ಕೆರೆಯನ್ನು ಸೇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.