ಹೊಸಪೇಟೆ (ವಿಜಯನಗರ): ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುವ ಸಲುವಾಗಿ ಆಚರಿಸುತ್ತಿರುವ ‘ಹಂಪಿ ಉತ್ಸವ’ ಶುಕ್ರವಾರದಿಂದ ಹಂಪಿಯಲ್ಲಿ ಆರಂಭವಾಗಲಿದ್ದು, ಹಾಡು, ನೃತ್ಯ, ವಿಚಾರಗೋಷ್ಠಿಗಳ ಮೂಲಕ ಲಕ್ಷಾಂತರ ಪ್ರೇಕ್ಷಕರಿಗೆ ರಸದೌತಣ ಉಣಬಡಿಸಲಿದೆ.
ಗಾಯತ್ರಿ ಪೀಠ ಸಮೀಪದ ಮೈದಾನದಲ್ಲಿ ನಿರ್ಮಿಸಲಾಗಿರುವ ಪ್ರಧಾನ ವೇದಿಕೆಗೆ ಹಂಪಿ ಉತ್ಸವದ ರೂವಾರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಹೆಸರನ್ನೇ ಇಡಲಾಗಿದ್ದು, ಮೊದಲ ದಿನ ರಮೇಶ್ ಅರವಿಂದ್, ರಾಜೇಶ್ ಕೃಷ್ಣನ್, ಹನುಮಂತ, ಎರಡನೇ ದಿನ ಉಪೇಂದ್ರ, ಅರ್ಜುನ್ ಜನ್ಯ, ಕೊನೆಯ ದಿನ ವಿಜಯ್ ರಾಘವೇಂದ್ರ, ರಮ್ಯಾ, ಗುರುಕಿರಣ್ ಪ್ರಮುಖ ಆಕರ್ಷಣೆಯಾಗಿರಲಿದ್ದಾರೆ.
ಪ್ರಧಾನ ವೇದಿಕೆ ಸಹಿತ ಒಟ್ಟು ಆರು ವೇದಿಕೆಗಳಲ್ಲಿ ಭರ್ಜರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಹಂಪಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ವಿಚಾರಗೋಷ್ಠಿ ಶನಿವಾರ ಮಧ್ಯಾಹ್ನ 2.30ಕ್ಕೆ ವಿರೂಪಾಕ್ಷ ದೇವಸ್ಥಾನದ ವೇದಿಕೆಯಲ್ಲಿ ನಡೆಯಲಿದೆ. ‘ವಿಜಯನಗರ ವೈಭವ’ ಧ್ವನಿಬೆಳಕು ಮಾರ್ಚ್ 6ರ ವರೆಗೆ ಪ್ರದರ್ಶನಗೊಳ್ಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶುಕ್ರವಾರ ಸಂಜೆ 7.30ಕ್ಕೆ ಉತ್ಸವಕ್ಕೆ ಚಾಲನೆ ನೀಡಲಿದ್ದು, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಪಾಲ್ಗೊಳ್ಳಲಿದ್ದಾರೆ.
ಎತ್ತು, ಕುರಿ, ಶ್ವಾನ ಪ್ರದರ್ಶನ, ಫಲಪುಷ್ಪ, ಸಾವಯವ ವಸ್ತು ಪ್ರದರ್ಶನ, ಚಿತ್ರಸಂತೆ, ಮತ್ಸ್ಯ ಮೇಳ, ಆಹಾರ ಮೇಳ, ಕುಸ್ತಿ, ಹೆಲಿಕಾಪ್ಟರ್ನಲ್ಲಿ ಹಂಪಿ ದರ್ಶನ, ದೋಣಿವಿಹಾರದಂತಹ ಹಲವು ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ.
ಹಂಪಿ ಸಮೀಪದ ಕಮಲಾಪುರ ಕೆರೆಯಲ್ಲಿ ಗುರುವಾರ ಸಾಹಸ ಜಲಕ್ರೀಡೆಗೆ ಚಾಲನೆ ನೀಡಿದ ಸಚಿವ ಜಮೀರ್ ಅಹಮದ್ ಖಾನ್ ಅವರು ಸ್ವತಃ ವಾಟರ್ ಸ್ಕೂಟರ್ ಚಲಾಯಿಸಿದರು –ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.