ADVERTISEMENT

ಹೊಸಪೇಟೆ: ಧ್ವನಿ ಬೆಳಕಿನಲ್ಲಿ ಸರ್ಕಾರಿ ನೌಕರರ ದರ್ಬಾರ್‌!

ಎಂ.ಜಿ.ಬಾಲಕೃಷ್ಣ
Published 5 ಫೆಬ್ರುವರಿ 2025, 4:59 IST
Last Updated 5 ಫೆಬ್ರುವರಿ 2025, 4:59 IST
ಧ್ವನಿ ಬೆಳಕು ಕಾರ್ಯಕ್ರಮದ ಸಂಗ್ರಹ ಚಿತ್ರ
ಧ್ವನಿ ಬೆಳಕು ಕಾರ್ಯಕ್ರಮದ ಸಂಗ್ರಹ ಚಿತ್ರ   

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಿರುವ ‘ವಿಜಯನಗರ ವೈಭವ’ವನ್ನು ಸಾರುವ ‘ಧ್ವನಿ ಬೆಳಕು’ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಅನುಮತಿ ದೊರೆತಿದ್ದು, ಭಾಗವಹಿಸುವ ಕಲಾವಿದರ ಪೈಕಿ 15ರಿಂದ 20 ಮಂದಿ ಸರ್ಕಾರಿ ನೌಕರರು ಇರುವುದಕ್ಕೆ ಕಲಾವಿದರ ವಲಯದಿಂದ ಆಕ್ಷೇಪ ವ್ಯಕ್ತವಾಗಿದೆ.

ಕಲೆಯನ್ನು ಕಲೆಯಾಗಿಯೇ ನೋಡಬೇಕು. ಸರ್ಕಾರಿ ನೌಕರರಲ್ಲೂ ಅನೇಕರು ಹುಟ್ಟು ಕಲಾವಿದರೂ ಇರುತ್ತಾರೆ, ಆದರೆ ಅವರಷ್ಟೇ ಸಮರ್ಥರಾಗಿರುವ ಸ್ಥಳೀಯ ಕಲಾವಿದರನ್ನು ಕಡೆಗಣಿಸಿ ಲಕ್ಷಗಟ್ಟಲೆ ಸಂಬಳ ಪಡೆಯುವ ನೌಕರರಿಗೆ ಮಣೆ ಹಾಕುವುದು ಸರಿಯೇ ಎಂಬುದು ಹಲವು ಕಲಾವಿದರ ಪ್ರಶ್ನೆಯಾಗಿದೆ.

ಕಳೆದ ವರ್ಷ ಇದೇ ವಿಚಾರವನ್ನು ಎತ್ತಿ ಆಕ್ಷೇಪ ಸಲ್ಲಿಸಿದ್ದಾಗ ಬಹುತೇಕ ಪೂರ್ವಾಭ್ಯಾಸ ಕೊನೆಗೊಂಡಿತ್ತು. ಆ ಹಂತದಲ್ಲಿ ಏನೂ ಮಾಡಲಾಗದು ಎಂದು ಜಿಲ್ಲಾಡಳಿತ ಹೇಳಿದ್ದ ಕಾರಣ ಸರ್ಕಾರಿ ನೌಕರರನ್ನು ಒಳಗೊಂಡ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಈ ಬಾರಿ ಇನ್ನೂ ಪೂರ್ವಾಭ್ಯಾಸಕ್ಕೆ ಸಮಯ ಇರುವಂತೆಯೇ ಕಲಾವಿದರು ಜಾಗೃತರಾಗಿ ತಮ್ಮ ಅಳಲನ್ನು ‘ಪ್ರಜಾವಾಣಿ’ ಬಳಿ ತೋಡಿಕೊಂಡಿದ್ದಾರೆ. ಆದರೆ ಅವರು ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸಿಲ್ಲ.

ADVERTISEMENT

ಇಷ್ಟು ವರ್ಷಗಳೂ ಸರ್ಕಾರಿ ನೌಕರರು ಪೂರ್ವಾಭ್ಯಾಸದ ನೆಪದಲ್ಲಿ ಒಒಡಿ ಅಡಿಯಲ್ಲಿ ಅಭ್ಯಾಸಕ್ಕೆ ಹಾಜರಾಗುತ್ತಿದ್ದರು. ಇದರಿಂದ ಅವರು ಸಾರ್ವಜನಿಕರಿಗೆ ಮಾಡಬೇಕಾದ ಸೇವೆ ಬಾಕಿ ಉಳಿಯುತ್ತಿತ್ತು ಅಥವಾ ಇತರರು ಮಾಡಬೇಕಾಗುತ್ತಿತ್ತು. ಈ ವರ್ಷವೂ ಅದೇ ಪರಿಪಾಠ ಮುಂದುವರಿಯುತ್ತದೆಯೇ ಎಂಬುದು ಕಲಾವಿದರ ಪ್ರಶ್ನೆ. ಅರ್ಹ ಕಲಾವಿದರನ್ನೇ ಬಳಸಿಕೊಂಡರೆ ಅವರಿಗೂ ಒಂದಿಷ್ಟು ಸಂಪಾದನೆಯ ಹಾದಿ ತೋರಿಸಿದಂತಾಗುತ್ತದೆ ಎಂಬುದು ಕಲಾವಿದರ ವಾದವಾಗಿದೆ.

110 ಕಲಾವಿದರು: ಧ್ವನಿ ಬೆಳಕಿನಲ್ಲಿ 100ರಿಂದ 110 ಕಲಾವಿದರಿಗೆ ಅವಕಾಶ ಇರುತ್ತದೆ. ಈ ಪೈಕಿ ಎಂ ಪ್ಯಾನೆಲ್‌ಮೆಂಟ್‌ ಕೋಟಾದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳಲ್ಲಿ ಅರಿವು ಕಾರ್ಯಕ್ರಮ ನೀಡುವ ಕಲಾವಿದರಿಗೆ ಅವಕಾಶ ನೀಡುವದು ಕಡ್ಡಾಯವಾಗಿರುತ್ತದೆ. ಹೀಗೆ 15ರಿಂದ 20 ಕಲಾವಿದರಿಗೆ ಅವಕಾಶ ಸಿಕ್ಕಿದರೆ, ಉಳಿದವರು ಸ್ಥಳೀಯ ಕಲಾವಿದರೇ ಆಗಿರುತ್ತಾರೆ. ಇವರಲ್ಲಿ ಸರ್ಕಾರಿ ನೌಕರರಿಗೆ ಅವಕಾಶ ಬೇಕೇ ಎಂಬುದು ಸದ್ಯ ಚರ್ಚೆಯ ವಿಷಯವಾಗಿದೆ.

2025ರ ಹಂಪಿ ಉತ್ಸವದ ಲಾಂಛನ
ಈ ಬಾರಿಯೂ ಅದ್ದೂರಿಯಾಗಿಯೇ ‘ಧ್ವನಿ ಬೆಳಕು’ ನಡೆಯಲಿದೆ. ಸರ್ಕಾರಿ ನೌಕರರನ್ನು ಇದರಿಂದ ದೂರ ಇಟ್ಟು ಕಲಾವಿದರಿಗೇ ಅವಕಾಶ ನೀಡುವ ಕುರಿತು ಪರಿಶೀಲಿಸಿ ನಿರ್ಧರಿಸಲಾಗುವುದು
ಎಂ.ಎಸ್. ದಿವಾಕರ್‌ ಜಿಲ್ಲಾಧಿಕಾರಿ

ಗೌರವಧನ ಹೆಚ್ಚಿಸಿ ಹೊಸ ಪೋಷಾಕು ಕೊಡಿಸಿ

ಎಂಟು ವರ್ಷಗಳಿಂದೀಚೆಗೆ ರಾಜ್ಯ ಸರ್ಕಾರ ಧ್ವನಿ ಬೆಳಕಿನ ಹೊಣೆ ಹೊತ್ತುಕೊಂಡ ಬಳಿಕ ಎಲ್ಲಾ ಕಲಾವಿದರನ್ನೂ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವ ಪರಿಪಾಠ ಬಂದಿದೆ. ಇದರಿಂದ ತುಂಬ ಅನುಭವಿ ಕಲಾವಿದರ ಅನುಭವ ಕಲೆಯನ್ನು ಕಡೆಗಣಿಸಿದಂತಾಗುತ್ತದೆ ಎಂಬ ಕೂಗು ಇದೆ. ಜತೆಗೆ ಸದ್ಯ ಕಲಾವಿದರಿಗೆ ಪೂರ್ವಾಭ್ಯಾಸ ಮತ್ತು ಪ್ರದರ್ಶನ ನೀಡುವ ದಿನಗಳಂದು ದಿನಕ್ಕೆ ₹ 1 ಸಾವಿರ ಗೌರವಧನ ಮಾತ್ರ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಬಡ ಕಲಾವಿದರಿಂದ ಕೇಳಿಬಂದಿದೆ.

ಕೆಲವೊಂದು ವೇಷಭೂಷಣಗಳು ರಾಜ ಪೋಷಾಕುಗಳು ಹಳೆಯದಾಗಿದ್ದು ಹೊಸ  ಪೋಷಾಕುಗಳನ್ನು ಕೊಡಿಸಬೇಕು ಎಂದು ಕೇಂದ್ರವು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಇದನ್ನು ಅಗತ್ಯವಾಗಿ ಪಾಲಿಸಿದರೆ ಮಾತ್ರ ಪ್ರದರ್ಶನ ಅತ್ಯುತ್ತಮವಾಗಿ ಮೂಡಿ ಬರುವುದು ಸಾದ್ಯವಾಗುತ್ತದೆ ಎಂದು ಕಲಾವಿದರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.