ADVERTISEMENT

ಭಾರಿ ಮಳೆಗೆ ಹೊಸಪೇಟೆಯಲ್ಲಿ ಅವಾಂತರ: ಮನೆಗಳಿಗೆ ನೀರು, ಕರಗಿದ ಗಣಪನ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2022, 6:11 IST
Last Updated 30 ಆಗಸ್ಟ್ 2022, 6:11 IST
ಹೊಸಪೇಟೆಯಲ್ಲಿ ಮಾರಾಟಕ್ಕಿಟ್ಟಿದ್ದ ಗಣಪನ ಮೂರ್ತಿಗಳು ಭಾರಿ ಮಳೆಗೆ ಹಾಳಾಗಿರುವುದು
ಹೊಸಪೇಟೆಯಲ್ಲಿ ಮಾರಾಟಕ್ಕಿಟ್ಟಿದ್ದ ಗಣಪನ ಮೂರ್ತಿಗಳು ಭಾರಿ ಮಳೆಗೆ ಹಾಳಾಗಿರುವುದು   

ಹೊಸಪೇಟೆ (ವಿಜಯನಗರ): ಬೆಳಂಬೆಳಿಗ್ಗೆ ಸುರಿದ ಭಾರಿ ಮಳೆಗೆ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ.

ನಗರದ ಬಸವ ಕಾಲುವೆ ಬಳಿ ಅನೇಕ ಮನೆಗಳಿಗೆ ನೀರು ನುಗ್ಗಿದೆ. ಕೊಳಚೆ ನೀರು ಬಂದದ್ದರಿಂದ ದುರ್ನಾತ ಹರಡಿದೆ. ಇನ್ನು, ಮಾರಾಟಕ್ಕೆ ಸಿದ್ಧಪಡಿಸಿ ಇಟ್ಟಿದ್ದ ಗಣಪನ ಮೂರ್ತಿಗಳೆಲ್ಲ ಮಳೆಗೆ ಹಾಳಾಗಿವೆ. ಇಟ್ಟ ಸ್ಥಿತಿಯಲ್ಲೇ ಕರಗಿವೆ.

ಇನ್ನು, ನಗರದ ಹುಡಾ ಕಚೇರಿ ಎದುರು ಹೊಳೆಯಂತೆ ನೀರು ಹರಿದಿದೆ. ಅಲ್ಲಿನ ಮನೆಗಳಿಗೆಲ್ಲ ನೀರು ನುಗ್ಗಿದೆ. ಚಪ್ಪರದಹಳ್ಳಿಯಲ್ಲೂ ಇದೇ ಪರಿಸ್ಥಿತಿ.

ADVERTISEMENT

ನಗರಸಭೆ ಪೌರಾಯುಕ್ತ ಮನೋಹರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಅತ್ಯಧಿಕ 13 ಸೆಂ.ಮೀ ಮಳೆಯಾಗಿದೆ. ಬ್ಯಾಲಕುಂದಿ-ಗರಗ ಗ್ರಾಮ ಸಂಪರ್ಕ ಕಡಿತಗೊಂಡಿದೆ. ರಭಸದಿಂದ ಹರಿಯುತ್ತಿರುವ ನೀರಿನಲ್ಲೇ ಜನ ಓಡಾಡುತ್ತಿದ್ದಾರೆ. ನಾಗಲಾಪುರ ಗ್ರಾಮದಲ್ಲಿ ಹಳ್ಳದ ನೀರು ಗ್ರಾಮಕ್ಕೆ‌ನುಗ್ಗಿದೆ. ತಾಲ್ಲೂಕಿನ ಹಂಪಿ, ಕಮಲಾಪುರ, ಹೊಸೂರು, ಕಡ್ಡಿರಾಂಪುರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿದೆ. ಬೆಳಿಗ್ಗೆ ಐದು ಗಂಟೆಗೆ ಆರಂಭಗೊಂಡ ಮಳೆ ಎಂಟು ಗಂಟೆಯವರೆಗೆ ಎಡೆಬಿಡದೇ ಸುರಿದಿದೆ. ಈಗ ಕಾರ್ಮೋಡ ಸುರಿದು ಸೂರ್ಯ ಹೊರಹೊಮ್ಮಿದ್ದಾನೆ. ಗೌರಿ ಗಣೇಶ ಹಬ್ಬಕ್ಕೆ ಜನ ಹೊರಗೆ ಬಂದು ಈಗ ಪೂಜಾ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.

ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಪಿ. ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.