ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತುಂಗಭದ್ರಾ ನದಿಯಲ್ಲಿ ಒಳ ಹರಿವು ಹೆಚ್ಚಳ ಆಗಿರುವುದರಿಂದ ನದಿ ತೀರದ ಗ್ರಾಮದಲ್ಲಿ ಪ್ರವಾಹ ಭೀತಿ ಮುಂದುವರಿದಿದೆ.
ಶನಿವಾರ ಪ್ರವಾಹ ತಗ್ಗಿದಂತೆ ಕಂಡು ಬಂದರೂ ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವುದರಿಂದ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ನದಿ ತೀರದ ಉದ್ದಕ್ಕೂ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ.
ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆ ಬ್ಯಾರೇಜ್ ನಲ್ಲಿ 82,283 ಕ್ಯುಸೆಕ್ ಒಳ ಹರಿವು ದಾಖಲಾಗಿದ್ದು, 18 ಗೇಟ್ ಗಳನ್ನು ತೆರೆದು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ.
ಹರಪನಹಳ್ಳಿ ಉಪ ವಿಭಾಗಾಧಿಕಾರಿ ಎಚ್.ಜಿ.ಚಂದ್ರಶೇಖರಯ್ಯ ತಾಲ್ಲೂಕಿನ ನದಿ ತೀರದ ಗ್ರಾಮಗಳಾದಕುರುವತ್ತಿ,ಹಿರೇಬನ್ನಿಮಟ್ಟಿ,ಚಿಕ್ಕಬನ್ನಿಮಟ್ಟಿ,ಬ್ಯಾಲಹುಣ್ಸಿಗೆ ಭೇಟಿ ನೀಡಿ ಪ್ರವಾಹಸ್ಥಿತಿಯನ್ನು ಅವಲೋಕಿಸಿದರು.
‘ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಯಾರೂ ನದಿಗೆ ಇಳಿಯಬಾರದು. ಜಾನುವಾರುಗಳನ್ನು ಮೈ ತೋಳೆಯುವುದು, ಬಟ್ಟೆ ತೊಳೆಯುವುದು, ಮೀನು ಹಿಡಿಯಲು ನದಿ ಪಾತ್ರಕ್ಕೆ ತೆರಳಬಾರದು’ ಎಂದು ಉಪವಿಭಾಗಾಧಿಕಾರಿ ಸೂಚಿಸಿದರು.
ನದಿಯ ಸಮೀಪದಲ್ಲಿ ವಾಸಿಸುವ ಕುಟುಂಬಗಳ ಜತೆ ಅವರು ಚರ್ಚಿಸಿದರು. ‘ಯಾವುದೇ ಸಂದರ್ಭದಲ್ಲಿ ಒಳ ಹರಿವು ಹೆಚ್ಚಳವಾಗುವ ಸಾಧ್ಯತೆ ಇದ್ದು, ಎಚ್ಚರಿಕೆಯಿಂದ ಇರಬೇಕು. ಪ್ರವಾಹ ಹೆಚ್ಚಳವಾದರೆ ಸುರಕ್ಷಿತ ಸ್ಥಳಗಳಲ್ಲಿ ತೆರೆಯಲಾಗುವ ಕಾಳಜಿ ಕೇಂದ್ರಕ್ಕೆ ತೆರಳಬೇಕು’ ಎಂದು ತಿಳಿಸಿದರು.
ಗ್ರೇಡ್-2ತಹಶೀಲ್ದಾರ್ ರವಿಕುಮಾರ್ ಕೊರವರ, ತಾ.ಪಂ.ಸಹಾಯಕನಿರ್ದೇಶಕ ಹೇಮಾದ್ರಿನಾಯ್ಕ, ಕಂದಾಯನಿರೀಕ್ಷಕ ಮಲ್ಲಿಕಾರ್ಜುನ, ಎಚ್.ಕೊಟ್ರೇಶ, ಗ್ರಾಮಲೆಕ್ಕಾಧಿಕಾರಿಗಳಾದ ಬಸಮ್ಮ,ಅಶೋಕ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.