ADVERTISEMENT

ಹೊಸಪೇಟೆ: ವಿರೂಪಾಕ್ಷನ ಕಂಬಕ್ಕೆ ತೂತು: ಎಎಸ್‌ಐ ನೋಟಿಸ್

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2023, 16:28 IST
Last Updated 11 ನವೆಂಬರ್ 2023, 16:28 IST
ಹಂಪಿ ವಿರೂಪಾಕ್ಷ ದೇವಸ್ಥಾನದ ಕಲ್ಲಿನ ಕಂಬಕ್ಕೆ ರಂಧ್ರ ಕೊರೆದಿರುವುದು  –ಪ್ರಜಾವಾಣಿ ಚಿತ್ರ
ಹಂಪಿ ವಿರೂಪಾಕ್ಷ ದೇವಸ್ಥಾನದ ಕಲ್ಲಿನ ಕಂಬಕ್ಕೆ ರಂಧ್ರ ಕೊರೆದಿರುವುದು  –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ವಿಶ್ವ ಪಾರಂಪರಿಕ ತಾಣದ ಪ್ರಮುಖ ಭಾಗವಾದ ಹಂಪಿ ವಿರೂಪಾಕ್ಷ ದೇವಸ್ಥಾನದ ಕಲ್ಲಿನ ಕಂಬಕ್ಕೆ ಡ್ರಿಲ್ಲಿಂಗ್ ಯಂತ್ರದಿಂದ ರಂಧ್ರ ಕೊರೆಯಲಾಗಿದ್ದು, ಭಾರತೀಯ ಪುರಾತತ್ವ ಇಲಾಖೆಯು (ಎಎಸ್‌ಐ) ಧಾರ್ಮಿಕ ದತ್ತಿ ಇಲಾಖೆಗೆ ನೋಟಿಸ್‌ ನೀಡಿದೆ. ದೇವರ ದರ್ಶನ ಪಡೆದ ಭಕ್ತರು ಹೊರಹೋಗುವ ಮುಖಮಂಟಪದಲ್ಲಿ ತಡೆ ನಿರ್ಮಿಸಲು ಈ ರಂಧ್ರ ಕೊರೆಯಲಾಗಿದೆ.

‘ಸ್ಮಾರಕಗಳ ಸಂರಕ್ಷಣೆಗೆ ನಾವು ಶಕ್ತಿಮೀರಿ ಶ್ರಮಿಸುತ್ತಿದ್ದರೂ ಇಂತಹ ಪ್ರಕರಣಗಳು ನಡೆಯುತ್ತಿದೆ. ಸ್ಮಾರಕಗಳಿಗೆ ಡ್ರಿಲ್ಲಿಂಗ್ ಯಂತ್ರ ಬಳಸಬಾರದು. ಇಲ್ಲಿ ನಮ್ಮ ಅನುಮತಿ ಪಡೆಯದೇ ರಂಧ್ರ ಕೊರೆಯಲಾಗಿದೆ. ನೋಟಿಸ್‌ಗೆ ನೀಡುವ ಉತ್ತರ ನೋಡಿಕೊಂಡು ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಎಎಸ್‌ಐ ಸಂರಕ್ಷಕ ಸಹಾಯಕ ಎಚ್‌.ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಸಹಕಾರ ಅಗತ್ಯ:

ADVERTISEMENT

‘ಸ್ಮಾರಕಗಳ ಸಂರಕ್ಷಣೆಗೆ ಎಎಸ್‌ಐ ಇದೆ. ಯಾವುದೇ ಕೆಲಸವಾದರೂ ಅನುಮತಿ ಅಗತ್ಯ. ಇಲಾಖೆಯ ಕಾಳಜಿ ಅರ್ಥ ಮಾಡಿಕೊಂಡು ಸರ್ಕಾರಿ ಇಲಾಖೆಗಳು, ಸಾರ್ವಜನಿಕರು ಸಹಕರಿಸಬೇಕಿದೆ’ ಎಂದು ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ನಿಹಿಲ್ ದಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹಂಪಿ ವಿರೂಪಾಕ್ಷ ದೇವಸ್ಥಾನದಲ್ಲಿ ದೇವರ ದರ್ಶನ ಮಾಡಿ ಹೊರಬರುವ ಪ್ರದೇಶ. ಇಲ್ಲೇ ತಡೆ ನಿರ್ಮಿಸಲು ಕಂಬಕ್ಕೆ ರಂಧ್ರ ಕೊರೆಯಲಾಗಿದೆ  –ಪ್ರಜಾವಾಣಿ ಚಿತ್ರ

ಕೆಲಸಗಾರನಿಗೆ ಗೊತ್ತಿರಲಿಲ್ಲ:

‘ಭಕ್ತರು ಸರದಿ ಸಾಲಿನಲ್ಲಿ ನಿರ್ಗಮಿಸಬೇಕು ಎಂಬ ಕಾರಣಕ್ಕೆ ತಡೆಬೇಲಿ ನಿರ್ಮಿಸಲು ಕೆಲಸ ನೆಡದಿತ್ತು. ಕೆಲಸಗಾರನಿಗೆ ಗೊತ್ತಿಲ್ಲದೇ ರಂಧ್ರ ಕೊರೆಯಲಾಗಿದೆ. ತಪ್ಪಾಗಿದ್ದು ಗೊತ್ತಾದ ಕೂಡಲೇ ಕೆಲಸ ನಿಲ್ಲಿಸಲಾಗಿದೆ. ನೋಟಿಸ್‌ ನೀಡಿದ್ದರ ಬಗ್ಗೆ ನನಗಿನ್ನೂ ಮಾಹಿತಿ ಬಂದಿಲ್ಲ’ ಎಂದು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಹನುಮಂತಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.