ಹೊಸಪೇಟೆ(ವಿಜಯನಗರ): ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆದ್ದವರು ಬಿಜೆಪಿ ಸೇರುವುದು ಮುಂದುವರೆದಿದೆ.
18ನೇ ವಾರ್ಡಿನಿಂದ ಪಕ್ಷೇತರರಾಗಿ ಜಯಿಸಿದ್ದ ಕಿರಣ್ ಭಾನುವಾರ ನಗರದಲ್ಲಿ ಬಿಜೆಪಿ ಸೇರಿದರು. ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಕಿರಣ್ ಅವರಿಗೆ ಬಿಜೆಪಿ ಪಕ್ಷದ ಧ್ವಜ ಕೊಟ್ಟು ಪಕ್ಷಕ್ಕೆ ಬರಮಾಡಿಕೊಂಡರು.
18ನೇ ವಾರ್ಡಿನಿಂದ ಬಿಜೆಪಿಯಿಂದ ಸ್ಪರ್ಧಿಸಲು ಕಿರಣ್ ಬಯಸಿದ್ದರು. ಆದರೆ, ಪಕ್ಷ ಅವರಿಗೆ ಟಿಕೆಟ್ ನೀಡಿರಲಿಲ್ಲ. ಪಕ್ಷದಿಂದ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿ 991 ಮತಗಳ ಅಂತರದಿಂದ ಕಿರಣ್ ಜಯಶಾಲಿಯಾಗಿದ್ದರು.
ಒಟ್ಟು 35 ಸದಸ್ಯ ಬಲದ ಹೊಸಪೇಟೆ ನಗರಸಭೆಯಲ್ಲಿ ಕಾಂಗ್ರೆಸ್ ಹಾಗೂ ಪಕ್ಷೇತರರು ತಲಾ 12 ಸ್ಥಾನಗಳಲ್ಲಿ ಗೆದ್ದಿದ್ದರು. ಬಿಜೆಪಿ 10, ಎಎಪಿಯಿಂದ ಒಬ್ಬ ಅಭ್ಯರ್ಥಿ ಗೆದ್ದಿದ್ದರು. ಜನವರಿ 6ರಂದು 8 ಜನ ಪಕ್ಷೇತರರು, ಎಎಪಿ ಸದಸ್ಯ ಬಿಜೆಪಿ ಸೇರಿದ್ದರು. ಅದರ ಬೆನ್ನಲ್ಲೇ ಇನ್ನೊಬ್ಬ ಪಕ್ಷೇತರ ಸದಸ್ಯ ಭಾನುವಾರ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಬಿಜೆಪಿಯ ಒಟ್ಟು ಸಂಖ್ಯಾಬಲ 20ಕ್ಕೆ ಏರಿಕೆಯಾಗಿದೆ. ಬಿಜೆಪಿ ಅಧಿಕಾರದ ಗದ್ದುಗೆಯೇರಲು ಮಾರ್ಗ ಪ್ರಶಸ್ತವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.