ADVERTISEMENT

‘ಹಿಂದಿ ದಿವಸ್‌’ ವಿರೋಧಿಸಿ ಜೆಡಿಎಸ್‌, ರಕ್ಷಣಾ ವೇದಿಕೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 8:31 IST
Last Updated 14 ಸೆಪ್ಟೆಂಬರ್ 2022, 8:31 IST
   

ಹೊಸಪೇಟೆ (ವಿಜಯನಗರ): ‘ಹಿಂದಿ ದಿವಸ್‌’ ವಿರೋಧಿಸಿ ಜೆ.ಡಿ.ಎಸ್‌. ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ನಂತರ ಮುಖ್ಯಮಂತ್ರಿಯವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಕೇಂದ್ರ ಸರ್ಕಾರ ‘ಹಿಂದಿ ದಿವಸ್‌’ ಆಚರಣೆಯ ಹೆಸರಿನಲ್ಲಿ ಹಿಂದಿಗೆ ಆದ್ಯತೆ ಕೊಟ್ಟು ಇತರೆ ಭಾಷೆಗಳನ್ನು ಕಡೆಗಣಿಸುತ್ತಿದೆ. ಸಂವಿಧಾನದಲ್ಲಿ ಸ್ಪಷ್ಟ ಭಾಷಾ ನೀತಿಯ ಉಲ್ಲೇಖವಿದೆ. ಹಿಂದಿ, ಇಂಗ್ಲಿಷ್‌ಗೆ ಹೆಚ್ಚಿನ ಆದ್ಯತೆ ಕೊಡುವುದರ ಮೂಲಕ ಇತರೆ ಭಾಷಿಕರಿಗೆ ಕಲಿಕೆ, ಪ್ರವೇಶ ಪರೀಕ್ಷೆ, ಉದ್ಯೋಗ ನೇಮಕಾತಿ, ಸಾರ್ವಜನಿಕ ಸೇವೆಗಳು ಕೊಡುವಾಗ ತೊಂದರೆ ಅನುಭವಿಸುತ್ತಿದ್ದಾರೆ. ಹಿಂದಿಯೇತರರ ಮೇಲೆ ಹಿಂದಿ ಹೇರಿಕೆ ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳನ್ನು ಆಡಳಿತ ಭಾಷೆಗಳಾಗಿ ಮಾಡಬೇಕು. ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಎಲ್ಲ ಭಾಷಿಕರಿಗೆ ಸಮಾನ ಅವಕಾಶಗಳು ಸಿಗಬೇಕು. ಹಿಂದಿ ದಿವಸ್‌, ಹಿಂದಿ ಸಪ್ತಾಹ, ಹಿಂದಿ ಪಕ್ವಾಡದಂಥ ಕಾರ್ಯಕ್ರಮಗಳನ್ನು ತಕ್ಷಣವೇ ನಿಲ್ಲಿಸಬೇಕು. ಯಾವ ಭಾಷೆಯನ್ನೂ ನಿರ್ಲಕ್ಷಿಸಬಾರದು ಎಂದು ಒತ್ತಾಯಿಸಿದ್ದಾರೆ.

ADVERTISEMENT

ರಕ್ಷಣಾ ಘಟಕದ ಜಿಲ್ಲಾ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಜೆ.ಡಿ.ಎಸ್‌. ಜಿಲ್ಲಾ ಅಧ್ಯಕ್ಷ ಕೊಟ್ರೇಶ್‌ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.