ADVERTISEMENT

ಕನ್ನಡಾಭಿಮಾನ ರಾಜ್ಯೋತ್ಸವಕ್ಕೆ ಸೀಮಿತವಲ್ಲ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 15:41 IST
Last Updated 27 ನವೆಂಬರ್ 2022, 15:41 IST
ಹೊಸಪೇಟೆಯ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಅಲ್ಲಿನ ಸಿಬ್ಬಂದಿ, ವಿದ್ಯಾರ್ಥಿಗಳು ಸಸಿಗೆ ನೀರೆರೆದು ಉದ್ಘಾಟಿಸಿದರು
ಹೊಸಪೇಟೆಯ ಶಂಕರ್‌ ಆನಂದ್‌ ಸಿಂಗ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಅಲ್ಲಿನ ಸಿಬ್ಬಂದಿ, ವಿದ್ಯಾರ್ಥಿಗಳು ಸಸಿಗೆ ನೀರೆರೆದು ಉದ್ಘಾಟಿಸಿದರು   

ಹೊಸಪೇಟೆ (ವಿಜಯನಗರ): ‘ಕನ್ನಡಾಭಿಮಾನ, ಪ್ರೀತಿ ರಾಜ್ಯೋತ್ಸವಕ್ಕೆ ಸೀಮಿತವಲ್ಲ, ಅದಕ್ಕೆ ಸೀಮಿತ ಕೂಡ ಆಗಬಾರದು’ ಎಂದು ಸಾಹಿತಿ ಯು. ರಾಘವೇಂದ್ರರಾವ್‌ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸಹಭಾಗಿತ್ವದಲ್ಲಿ ಶನಿವಾರ ನಗರದ ಶಂಕರ್ ಆನಂದ್‌ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಕರುಳ ಭಾಷೆ ಆಗಬೇಕು ಎಂದರು.

ಕನ್ನಡ ಸಂಸ್ಕೃತಿ ಅಂದರೆ ಅದು ಬದುಕು. ಬದುಕಿನ ಜೊತೆಗೆ ಭಾಷೆಯೂ ಉಳಿಯಬೇಕು. ಭಾಷೆ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ನಾಡು ನುಡಿಯ ಜೊತೆಗೆ ಸಂಸ್ಕೃತಿ ಸಂರಕ್ಷಣೆಗೆಯೂ ಅಗತ್ಯ. ಪ್ರತಿಯೊಬ್ಬರೂ ನಾಡು ನುಡಿಗಾಗಿ ಸಂಕಲ್ಪ ತೊಡಬೇಕು ಎಂದು ಹೇಳಿದರು.

ADVERTISEMENT

ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಚೆಲುವರಾಜು ಮಾತನಾಡಿ, ಭಾಷೆ ಸಮುದಾಯಗಳಲ್ಲಿ ಉಸಿರಾಡುತ್ತದೆ. ಸಮುದಾಯಗಳು ನಾಶವಾದರೆ ಮಾತ್ರ ಭಾಷೆಗಳೂ ಅಳಿಯುತ್ತವೆ. ಕನ್ನಡ ಭಾಷೆ ಎಂದಿಗೂ ಸಾಯುವುದಿಲ್ಲ. ಕನ್ನಡ ನುಡಿಗೆ ದೀರ್ಘ ಇತಿಹಾಸ, ಪರಂಪರೆ ಇದೆ. ಕನ್ನಡ ಸಮುದಾಯ ಭಾಷೆಯನ್ನು ಎಚ್ಚರಿಕೆಯಿಂದ ಬಳಸಬೇಕು. ಇಂಗ್ಲಿಷ್‌ ಪ್ರಭಾವದಿಂದಾಗಿ ಕನ್ನಡನುಡಿ ಸಾಯುತ್ತಿಲ್ಲ, ಬದಲಿಗೆ ಕರಗುತ್ತಿದೆ ಎಂದರು.

ಎಮ್ಮಿಗನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ. ಲಿಂಗಣ್ಣ ಜಂಗಮರಹಳ್ಳಿ, ನಿವೃತ್ತ ಪಿ.ಎಸ್.ಐ ಸತ್ಯನಾರಾಯಣಪ್ಪ, ಪ್ರಾಂಶುಪಾಲ ಪ್ರೊ.ನಟರಾಜ ಪಾಟೀಲ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸಿ.ದೇವಣ್ಣ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ.ಟಿ.ಎಚ್.ಬಸವರಾಜ, ಪರಿಷತ್ತಿನ ಕಾರ್ಯದರ್ಶಿ ಪ್ರಕಾಶ್, ಸಂಚಾಲಕ ಸಂಗಮೇಶ ಎಸ್. ಗಣಿ, ಬಿ.ವಿ.ನಾಗವೇಣಿ, ರಘುಪ್ರಸಾದ್, ಸೋ.ದಾ.ವಿರೂಪಾಕ್ಷಗೌಡ, ಉಮಾಮಹೇಶ್ವರ, ಮಾರುತಿ ಗುಂಡಿ, ಶ್ರೀಕಾಂತ್ ಬಂಡೆ, ಕೇಶವಪ್ರಸಾದ್, ಗಾದೆಪ್ಪ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.