ADVERTISEMENT

24 ಗಂಟೆಯೊಳಗೆ ಆರು ಜನ ಬಾಲಕನ ಅಪಹರಣಕಾರರ ಬಂಧನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 11:08 IST
Last Updated 5 ಜುಲೈ 2022, 11:08 IST
ಅಪಹರಣಕಾರರ ಬಂಧನ
ಅಪಹರಣಕಾರರ ಬಂಧನ   

ಹೊಸಪೇಟೆ (ವಿಜಯನಗರ): ಬಾಲಕನ ಅಪಹರಣ ಪ್ರಕರಣ ನಡೆದ 24 ಗಂಟೆ ಕಳೆಯುವುದರೊಳಗೆ ಆರು ಜನರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಗರಿಬೊಮ್ಮನಹಳ್ಳಿಯ ಅಲ್ಲಾಭಕ್ಷಿ ಕರೀಂ ಸಾಬ್‌ (25), ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಹಲಗಾಪುರದ ಚನ್ನಬಸವ ಸೋಮಪ್ಪ (26), ಕೊಟ್ರೇಶ ಜಂಬಪ್ಪ (23), ಕೇಶವರಾಯನಬಂಡಿಯ ರಮೇಶ ದೊಡ್ಡನಿಂಗಪ್ಪ (22), ಬಸವರಾಜ ನಿಂಗಪ್ಪ (22), ಹಂಪಾಪಟ್ಟಣದ ರವಿ ನಿಂಗಪ್ಪ (38) ಬಂಧಿತರು. 7 ಮೊಬೈಲ್, ಎರಡು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

‘ಕೂಡ್ಲಿಗಿ ಡಿವೈಎಸ್ಪಿ ಜಿ. ಹರೀಶ್‌, ಹಗರಿಬೊಮ್ಮನಹಳ್ಳಿ ಸಿಪಿಐ ಟಿ. ಮಂಜಣ್ಣ, ಪಿಎಸ್‌ಐ ಪಿ. ಸರಳಾ, ಕೂಡ್ಲಿಗಿ ಸಿಪಿಐ ವಸಂತ ಅಸೋದೆ, ತಂಬ್ರಹಳ್ಳಿ ಠಾಣೆ ಪಿಎಸ್‌ಐ ನಾರಾಯಣ ಹಾಗೂ ಚಿತ್ತವಾಡ್ಗಿ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಜಯಪ್ರಕಾಶ್‌, ಮರಿಯಮ್ಮನಹಳ್ಳಿ ಠಾಣೆ ಪಿಎಸ್‌ಐ ಹನುಮಂತಪ್ಪ ಅವರನ್ನು ಒಳಗೊಂಡ ಮೂರು ತನಿಖಾ ತಂಡಗಳು ಕಾರ್ಯಾಚರಣೆ ನಡೆಸಿ, ಕೃತ್ಯದಲ್ಲಿ ಭಾಗಿಯಾದವರನ್ನು ಸೋಮವಾರ ಬಂಧಿಸಿದ್ದಾರೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ., ಮಂಗಳವಾರ ಇಲ್ಲಿ ತಿಳಿಸಿದರು.

ADVERTISEMENT

ಹೆಡ್ ಕಾನ್‌ಸ್ಟೆಬಲ್‌ಗಳಾದ ರೇವಣಸಿದ್ದಪ್ಪ, ರಾಮಾಂಜನೇಯ, ಕಾನ್‌ಸ್ಟೆಬಲ್‌ಗಳಾದ ಮಲ್ಲೇಶ್ ನಾಯ್ಕ, ಶಂಕರನಾಯ್ಕ, ಆನಂದಪ್ಪ, ಸುರೇಶ್, ಮಂಜುನಾಥ, ಗುರುಬಸವರಾಜ, ಯಮನಪ್ಪ ಬಂಡೆ, ಗಿರೀಶ್, ನಿಚ್ಚಾಪುರ ಗಣೇಶ್, ರೇವಣಸಿದ್ದಪ್ಪ, ಪೂಜಾರ್ ಗಣೇಶ್, ಸಿ.ವೀರೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಡೆದಿದ್ದೇನು?
ಹಗರಿಬೊಮ್ಮನಹಳ್ಳಿ ಹಳೆ ಊರಿನ ನೀರಾವರಿ ಇಲಾಖೆಯ ಆವರಣದಲ್ಲಿ ಆಟ ಆಡುತ್ತಿದ್ದ ಅದ್ವಿಕ್‍ನನ್ನು (5) ಭಾನುವಾರ (ಜು.3) ಅಪಹರಿಸಲಾಗಿತ್ತು. ಬಾಲಕನ ತಂದೆ ಈ.ರಾಘವೇಂದ್ರ ಅವರಿಗೆ ಅಪಹರಣಕಾರರು ಕರೆ ಮಾಡಿ ₹15 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹3 ಲಕ್ಷ ನೀಡಬೇಕೆಂದು ತಿಳಿಸಿದ್ದರು. ಪೋಷಕರು ಈ ವಿಷಯ ಪೊಲೀಸರ ಗಮನಕ್ಕೆ ತಂದಿದ್ದರು. ಬಾಲಕನ ಅಜ್ಜ ಈ. ಕೃಷ್ಣಮೂರ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಬಳಿಕ ಎಸ್ಪಿ ತನಿಖಾ ತಂಡ ರಚಿಸಿದ್ದರು.

ಅಪಹರಣಕಾರರು ಹಗರಿಬೊಮ್ಮನಹಳ್ಳಿಯ ಮೋರಿಗೇರಿ ಕ್ರಾಸ್‌ನ ಉಲವತ್ತಿ ಗ್ರಾಮದ ಮಣ್ಣಿನ ರಸ್ತೆಯಲ್ಲಿ ಬಾಲಕನ ಸಮೇತ ಅಡಗಿ ಕುಳಿತ್ತಿದ್ದರು. ಬಾಲಕನ ತಂದೆ ರಾಘವೇಂದ್ರ ಅವರು ಪತ್ನಿಯೊಂದಿಗೆ ಹಣದ ಸಮೇತ ಅಲ್ಲಿಗೆ ತೆರಳಿದ್ದರು. ಅವರೊಂದಿಗೆ ಪೊಲೀಸರು ಗ್ರಾಮೀಣರಂತೆ ವೇಷ ಮರೆಸಿಕೊಂಡು ಹಿಂಬಾಲಿಸಿ, ಸುತ್ತುವರೆದಿದ್ದರು. ಇಬ್ಬರು ಪೊಲೀಸರು, ಕುಡುಕರಂತೆ ನಟಿಸುತ್ತ ಅಪಹರಣಕಾರರ ಬಳಿ ತೆರಳುತ್ತಿದ್ದಂತೆ ಅಪಹರಣಕಾರರು, ಬಾಲಕ ಮತ್ತು ಬೈಕ್ ಬಿಟ್ಟು ಪರಾರಿಯಾಗಿದ್ದರು. ಬಳಿಕ ಬಾಲಕ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.