ADVERTISEMENT

ಹೂವಿನಹಡಗಲಿ|ವಾಯುವಿಹಾರಕ್ಕೆ ತೆರಳಿದ್ದ ವೇಳೆ ವ್ಯಕ್ತಿ ಅಪಹರಣ: ₹5 ಕೋಟಿಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 3:57 IST
Last Updated 11 ಅಕ್ಟೋಬರ್ 2025, 3:57 IST
ಮಂಜುನಾಥ
ಮಂಜುನಾಥ   

ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ಶುಕ್ರವಾರ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಮಂಜುನಾಥ ಶೇಜವಾಡಕರ್ (58) ಎಂಬುವರನ್ಹು ದುಷ್ಕರ್ಮಿಗಳು ಅಪಹರಿಸಿದ್ದು, ₹5 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.

‘ಬೆಳಿಗ್ಗೆ ಮೈಲಾರ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಮಂಜುನಾಥ ಅವರು 8 ಗಂಟೆಯಾದರೂ ಮನೆಗೆ ಮರಳಿರಲಿಲ್ಲ. ಇದೇ ವೇಳೆ ಅಪಹರಣಕಾರರು ಮಂಜುನಾಥ ಅವರ ಮೊಬೈಲ್‌ನಿಂದ ದಾವಣಗೆರೆಯಲ್ಲಿ ವೈದ್ಯೆಯಾಗಿರುವ ಅವರ ಅಕ್ಕ ಮಂಜುಳಾ ಶೇಜವಾಡಕರ್ ಅವರಿಗೆ ವಾಟ್ಸ್‌ಆ್ಯಪ್‌ ಕರೆ ಮಾಡಿಸಿ ‘ವಾಕಿಂಗ್ ಹೋಗಿದ್ದ ನನ್ನನ್ನು ಕಾರಿನಲ್ಲಿ ಬಂದವರು ಅಪಹರಿಸಿ ಕಟ್ಟಿ ಹಾಕಿದ್ದಾರೆ. ₹5 ಕೋಟಿ ಕೊಡುವಂತೆ ಹೇಳುತ್ತಿದ್ದಾರೆ’ ಎಂದು ಹೇಳಿಸಿದ್ದರು’ ಎಂದು ಹಿರೇಹಡಗಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹೀಗೆ ಮಾತನಾಡುತ್ತಿದ್ದಾಗಲೇ ಅಪಹರಣಕಾರನೊಬ್ಬ ಪೋನ್ ಕಿತ್ತುಕೊಂಡು ‘ನಾವು ಕೇಳಿದಷ್ಟು ಹಣ ಬೇಗನೇ ನೀಡಬೇಕು. ನಮಗೂ ಇವರಿಗೂ ಯಾವುದೇ ದ್ವೇಷ ಇಲ್ಲ. ನಮಗೆ ಹಣ ಬೇಕು’ ಎಂದಿದ್ದಾನೆ. ಇದಕ್ಕೆ ಡಾ.ಮಂಜುಳಾ ಪ್ರತಿಕ್ರಿಯಿಸಿ, ಅಷ್ಟೊಂದು ಹಣ ನೀಡಲು ಆಗುವುದಿಲ್ಲ, ಒಂದು ಲಕ್ಷ ನೀಡಲು ಸಾಧ್ಯವಾಗಬಹುದು’ ಎಂದಿದ್ದಾರೆ. ಆಗ ಅಪಹರಣಕಾರ ‘ನಾವು ಕೇಳಿದಷ್ಟು ಹಣ ನೀಡದಿದ್ದರೆ ನಿಮ್ಮ ತಮ್ಮನ ಬಾಡಿಯೂ ಸಿಗುವುದಿಲ್ಲ’ ಎಂದು ಹೆದರಿಸಿದ್ದಾನೆ. ಈ ಆಡಿಯೋ ಸಂಭಾಷಣೆ ಜಾಲತಾಣದಲ್ಲಿ ಇದೀಗ ವ್ಯಾಪಕವಾಗಿ ಪ್ರಸಾರವಾಗಿದೆ.

ADVERTISEMENT

‘ಮಂಜುನಾಥ ಈ ಮೊದಲು ವ್ಯಾಪಾರಸ್ಥರು ಆಗಿದ್ದರು. ಅವರ ರಕ್ಷಣೆಗಾಗಿ ತಂಡಗಳನ್ನು ರಚಿಸಿಕೊಂಡು, ಕಾರ್ಯಾಚರಣೆ ನಡೆಸಿದ್ದೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.