ಸಿರುಗುಪ್ಪ: ‘ಪರಿಸರವನ್ನು ನಮ್ಮ ಸ್ವಾರ್ಥಕ್ಕಾಗಿ ನಿತ್ಯ ನಾಶ ಮಾಡುತ್ತಿದ್ದೇವೆ. ಪ್ರಕೃತಿ ವಿಕೋಪಗಳು ಹೆಚ್ಚಾಗಿ ಸಂಭವಿಸಲು ಅದೇ ಕಾರಣವಾಗಿದೆ. ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸೋಣ, ಪರಿಸರ ಸಂರಕ್ಷಿಸೋಣ’ ಎಂದು ಸಿವಿಲ್ ನ್ಯಾಯಾಧೀಶ ಅಶೋಕ್ ಆರ್.ಎಚ್. ಹೇಳಿದರು.
ನಗರದ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ, ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಗುರುವಾರ ನಡೆದ ವಿಶ್ವ ಪರಿಸರ ದಿಣಾಚರಣೆಯಲ್ಲಿ ಮಾತನಾಡಿದರು.
‘ಪ್ರಕೃತಿಯು ನಮಗೆ ಕೊಡುವುದನ್ನು ನಾವು ಆನಂದಿಸುತ್ತೇವೆ. ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ಮರೆಯಬಾರದು. ಪರಿಸರ ಉಳಿಸುವುದು ನಮ್ಮ ಮುಂದಿನ ಪೀಳಿಗೆಯ ಭದ್ರತೆಗಾಗಿ’ ಎಂದರು.
ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೊಬ ಅರಣ್ಯ ರಕ್ಷಣೆ ಮತ್ತು ನಾಶಕ್ಕೆ ಸಂಬಂಧಿಸಿದ ಕಾನೂನುಗಳ ಮಾಹಿತಿ ನೀಡಿದರು. ಉಪವಲಯ ಅರಣ್ಯಾಧಿಕಾರಿ ರಾಜ ಅಂಬಣ್ಣ ನಾಯಕ ಅರಣ್ಯದಿಂದಾಗುವ ಉಪಯೋಗಗಳು ಮತ್ತು ವಿಕೋಪಗಳ ಕುರಿತು ವಿವರಿಸಿದರು.
ಶಿರಸ್ತೆದಾರ ಸಿದ್ಧಾರ್ಥ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕೌಶಿಕ್ ದಳವಾಯಿ, ಪ್ರಾಂಶುಪಾಲ ಜಿ.ಸಿದ್ದಲಿಂಗಯ್ಯ, ವಕೀಲರಾದ ಮಲ್ಲನಗೌಡ, ವೆಂಕಟೇಶ ನಾಯ್ಕ, ಅಬ್ದುಲ್ ಸಾಬ್ ರಾರಾವಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.