ಹೊಸಪೇಟೆ (ವಿಜಯನಗರ): ‘ಮ್ಯಾಂಡಸ್’ ಚಂಡಮಾರುತದ ಪ್ರಭಾವ ಜಿಲ್ಲೆಯಾದ್ಯಂತ ಎರಡನೇ ದಿನವೂ ಕಾಣಿಸಿಕೊಂಡಿದೆ.
ಶನಿವಾರ ಹಗಲು, ರಾತ್ರಿ ಸುರಿದ ಜಡಿ ಮಳೆ, ಭಾನುವಾರವೂ ಮುಂದುವರೆದಿದೆ. ದಟ್ಟ ಮಂಜು, ನಿರಂತರ ಮಳೆಗೆ ಚಳಿಯ ಪ್ರಮಾಣ ಹೆಚ್ಚಾಗಿದೆ. ಸತತ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಜನರ ಓಡಾಟ ವಿರಳವಾಗಿದೆ.
ಇನ್ನೊಂದೆಡೆ ವಾರಾಂತ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಪ್ರವಾಸಿಗರು ಮಳೆಯಲ್ಲೇ ನೆನೆದುಕೊಂಡು ಹಂಪಿ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಶನಿವಾರ ರಾತ್ರಿ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಕಾರ್ತಿಕೋತ್ಸವ ಕೂಡ ಮಳೆಯಲ್ಲೇ ನಡೆಯಿತು.
ಭಕ್ತರು ಶ್ರದ್ಧಾ, ಭಕ್ತಿ ನಡುವೆ ದೀಪಗಳನ್ನು ಬೆಳಗಿಸಿದರು. ಇನ್ನು, ಚಕ್ರತೀರ್ಥದ ಕೋದಂಡರಾಮ ಸ್ವಾಮಿ ದೇವಸ್ಥಾನದ ಪರಿಸರದಲ್ಲಿ ಫಲ ಪೂಜಾ ಮಹೋತ್ಸವ ನಡೆಯಿತು. ವಿವಿಧ ಕಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಬಂದು ದೇವರ ದರ್ಶನ ಪಡೆದರು.
ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಸೇರಿದಂತೆ ಹಲವೆಡೆ ಮಳೆ ಮುಂದುವರೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.