ADVERTISEMENT

ಮಂತ್ರಾಲಯದ್ದೇ ಮೂಲರಾಮ ಪ್ರತಿಮೆ: ಸುಬುಧೇಂದ್ರ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 5:38 IST
Last Updated 13 ನವೆಂಬರ್ 2025, 5:38 IST
ಹಂಪಿಯ ರಘುನಂದನ ತೀರ್ಥರ ವೃಂದಾವನದಲ್ಲಿ ಬುಧವಾರ ನಡೆದ ಮಧ್ಯಾರಾಧನೆಯಲ್ಲಿ ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀ ಆಶೀರ್ವಚನ ನೀಡಿದರು
ಹಂಪಿಯ ರಘುನಂದನ ತೀರ್ಥರ ವೃಂದಾವನದಲ್ಲಿ ಬುಧವಾರ ನಡೆದ ಮಧ್ಯಾರಾಧನೆಯಲ್ಲಿ ಮಂತ್ರಾಲಯ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀ ಆಶೀರ್ವಚನ ನೀಡಿದರು   

ಹೊಸಪೇಟೆ (ವಿಜಯನಗರ): ‘ಮಂತ್ರಾಲಯಕ್ಕೆ (ವಿದ್ಯಾಮಠ) ಮೂಲ ರಾಮದೇವರನ್ನು ಮರಳಿ ತಂದುಕೊಟ್ಟವರೇ ಶ್ರೀ ರಘುನಂದನ ತೀರ್ಥರು. ಜಗತ್ತಿನಲ್ಲಿ ಇರುವ ಮೂಲರಾಮದೇವರ ಮೂರ್ತಿ ಎಂದರೆ ಮಂತ್ರಾಲಯದ್ದು ಮಾತ್ರ’ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಹಂಪಿಯಲ್ಲಿರುವ ರಘುನಂದನ ತೀರ್ಥರ ಮೂಲ ವೃಂದಾವನ ಸನ್ನಿಧಿಯಲ್ಲಿ ಬುಧವಾರ ತೀರ್ಥರ ಮಧ್ಯಾರಾಧನೆಯ ಪ್ರಯುಕ್ತ ಮೂಲರಾಮಚಂದ್ರ ದೇವರ ಸಂಸ್ಥಾನ ಪೂಜೆ ನೆರವೇರಿಸಿ ಅನುಗ್ರಹ ಸಂದೇಶ ನೀಡಿದ ಅವರು, ‘ಮಠದಲ್ಲಿ ಭಕ್ತರಿಗೆ ನಿರಂತರವಾಗಿ ಯಾವುದೇ ಜಾತಿ, ಮತ, ಮಠ ಭೇದವಿಲ್ಲದೆ ಮೂಲರಾಮನ ವಿಶ್ವರೂಪ ದರ್ಶನ ಲಭಿಸುತ್ತಿದೆ’ ಎಂದರು.

‘ಮೂಲರಾಮನ ಲಕ್ಷಣಗಳನ್ನು ನೋಡಿದರೆ ಇದೇ ಮೂಲ ರಾಮಚಂದ್ರದೇವರು ಎಂಬುದು ತಿಳಿಯುತ್ತದೆ. ಮೂಲರಾಮ ನಮ್ಮಲ್ಲಿದೆ ಎನ್ನುವವರು ಇದುವರೆಗೆ ಎಲ್ಲಿಯೂ ಭಕ್ತರಿಗೆ ವಿಶ್ವರೂಪ ದರ್ಶನ ಮಾಡಿಸುವ ಧೈರ್ಯ ಮಾಡಿಲ್ಲ. ಆದರೆ ಮಂತ್ರಾಲಯದಲ್ಲಿರುವ ಮೂಲರಾಮ ಚತುರ್ಯುಗ ಚತುರ್ಮುಖ ಬ್ರಹ್ಮದೇವರು ಕರಾರ್ಚಿತ ಶ್ರೀಮೂಲರಾಮದೇವರಾಗಿದ್ದು, ಚತುರ್ವಿಧ ಪುರುಷಾರ್ಥ ನೀಡುತ್ತಾನೆ’ ಎಂದು ಶ್ರೀಗಳು ನುಡಿದರು.

ADVERTISEMENT

ಶ್ರೀಗಳು ಮೂಲರಾಮದೇವರ ಸಂಸ್ಥಾನ ಪೂಜೆ ನೆರವೇರಿಸಿ, ಭಕ್ತರಿಗೆ ದರ್ಶನ ಮಾಡಿಸಿದರು. ಬಳಿಕ ನೈವೇದ್ಯ, ಹಸ್ತೋದಕ ನೆರವೇರಿಸಿ ಮಹಾಮಂಗಳಾರತಿ ಮಾಡಿದರು. ಪ್ರಸಾದ ವಿತರಣೆ ನಡೆಯಿತು.

ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ರಾಜ್ಯ ಸಂಚಾಲಕ ಸುಳಾದಿ ಹನುಮೇಶಾಚಾರ್ಯ ದಾಸ ಸಾಹಿತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಮಠದ ಪಂಡಿತರಾದ ಶಮಾಚಾರ್ಯ, ದ್ವಾರಕನಾಥ ಆಚಾರ್ಯ, ವೇಣುಗೋಪಾಲ ಆಚಾರ್ಯ, ಶ್ರೀಗಳ ಆಪ್ತ ಸಹಾಯಕ ಪ್ರಕಾಶ್, ಮಠಾಧಿಕಾರಿಗಳಾದ ಭೀಮಸೇನಾಚಾರ್ಯ, ಪವನಾಚಾರ್ಯ, ವಿಚಾರಣಕರ್ತ ಗುರುರಾಜ್ ದಿಗ್ಗಾವಿ, ವ್ಯವಸ್ಥಾಪಕರಾದ ಸುಮಂತ್ ಕುಲಕರ್ಣಿ, ಟೀಕಾಚಾರ್ಯ, ಪ್ರಮುಖರಾದ ಹತ್ತಿಬೆಳಗಲ್ ಗುರುರಾಜ್ ಆಚಾರ್ಯ, ಸುಧೀಂದ್ರಾಚಾರ್ಯ ಬಡಾದ್, ದಾಸ ಸಾಹಿತ್ಯ ಪ್ರಾಜೆಕ್ಟ್ ಜಿಲ್ಲಾ ಸಂಚಾಲಕ ಅನಂತ ಪದ್ಮನಾಭ ಇದ್ದರು.