ADVERTISEMENT

ಮಾನಸಿಕ ಆರೋಗ್ಯಕ್ಕೆ ಯೋಗ, ಧ್ಯಾನವೇ ಮದ್ದು: ನ್ಯಾಯಾಧೀಶ ಎನ್.ಸುಬ್ರಮಣ್ಯ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 4:35 IST
Last Updated 30 ಅಕ್ಟೋಬರ್ 2025, 4:35 IST
ಹೊಸಪೇಟೆಯಲ್ಲಿ ಬುಧವಾರ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಯಿತು
ಹೊಸಪೇಟೆಯಲ್ಲಿ ಬುಧವಾರ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಯಿತು   
ಬಾಲಗರ್ಭಿಣಿಯರು ಹೆಚ್ಚಳ–ಕಳವಳ ದೌರ್ಜನ್ಯ–ಉಚಿತ ಕಾನೂನು ನೆರವು ಲಭ್ಯ | ಸೈಬರ್ ಅಪರಾಧ ಕುರಿತು ಎಚ್ಚರ ಅಗತ್ಯ

ಹೊಸಪೇಟೆ (ವಿಜಯನಗರ): ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವೂ ಮುಖ್ಯ. ಯೋಗ ಮತ್ತು ಧ್ಯಾನಗಳೇ ಮಾನಸಿಕ ಆರೋಗ್ಯಕ್ಕೆ ಇರುವ ಪರಿಣಾಮಕಾರಿ ಮದ್ದು ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎನ್.ಸುಬ್ರಮಣ್ಯ ಹೇಳಿದರು.

ಇಲ್ಲಿನ ಡಿಎಚ್‌ಒ ಕಚೇರಿಯಲ್ಲಿ ಬುಧವಾರ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಮತ್ತು ಅಂತರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಕಾರಾತ್ಮಕ ಚಿಂತನೆ, ದುಶ್ಚಟಗಳಿಂದ ಮುಕ್ತವಾಗಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದ ಮಾನಸಿಕವಾಗಿ ಸಂತಸ ವೃದ್ಧಿಯಾಗಲಿದೆ’ ಎಂದರು.

ADVERTISEMENT

‘ಉತ್ತರ ಕರ್ನಾಟಕ ಸೇರಿದಂತೆ ದಕ್ಷಿಣ ಭಾಗದ ಕೆಲವು ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಲಗರ್ಭಿಣಿಯರು ಸಂಖ್ಯೆ ದಾಖಲಾಗುತ್ತಿರುವುದು ವಿಷಾದನೀಯ. ಇದನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಜತೆಗೆ ಸಾರ್ವಜನಿಕರು ಸಹಕರಿಸಬೇಕು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳು ಕಂಡು ಬಂದಲ್ಲಿ ಕೂಡಲೇ ಆಯಾ ತಾಲ್ಲೂಕಿನ ತಾಲ್ಲೂಕು ಕಾನೂನು ಸೇವಾ ಸಮಿತಿಗೆ ದೂರು ಸಲ್ಲಿಸಬೇಕು’ ಎಂದರು.

ಸಿವಿಲ್ ನ್ಯಾಯಾಧೀಶ ಪ್ರಶಾಂತ್ ನಾಗಲಾಪುರ್ ಮಾತನಾಡಿ, ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಶಿಕ್ಷಣ ಮಹತ್ವ ತಿಳಿಸಬೇಕಿದೆ. ಬಾಲ್ಯವಿವಾಹ ಸೇರಿ ಮಹಿಳೆಯರ ಮೇಲಿನ ದೌರ್ಜನ್ಯ ಕಂಡರೆ ಪೊಲೀಸ್ ಇಲಾಖೆಗೆ ದೂರು ಸಲ್ಲಿಸಬೇಕು ಎಂದರು.

ನಗರಠಾಣೆ ಪಿಎಸ್‌ಐ ರಾಜಶೇಖರ ಮಾತನಾಡಿ, ಈಚೆಗೆ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಸ ಸಂಖ್ಯೆಯಿಂದ ಬಂದಿರುವ ಲಿಂಕ್ ಅಥವಾ ಕರೆಗಳ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆ ವಹಿಸಬೇಕು. ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ಪೊಲೀಸ್ ಸಹಾಯವಾಣಿ 112 ಅಥವಾ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.

ಇದೇ ವೇಳೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಕೆ.ರಾಧಿಕಾ ಪ್ರಾಸ್ತವಿಕವಾಗಿ ಮಾತನಾಡಿದರು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಶ್ರೀನಿವಾಸ ಮೂರ್ತಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಜಂಬಯ್ಯ, ಸಿಡಿಪಿಒ ಸಿಂಧು ಅಂಗಡಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಸತೀಶ್ ಚಂದ್ರ, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ವಿನಯ, ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ ಡಾ.ಭಾಸ್ಕರ್, ಟಿಎಂಎಇಎಸ್ ನರ್ಸಿಂಗ್ ಆಫ್ ಸ್ಕೂಲ್ ಪ್ರಾಂಶುಪಾಲ ಡಾ.ಎನ್.ಸೋಮಶೇಖರ್ ಇತರರು ಇದ್ದರು.

14416 ಸಂಖ್ಯೆಗೆ ಕರೆ ಮಾಡಿ

ಡಿಎಚ್‌ಒ ಡಾ.ಎಲ್‌.ಆರ್.ಶಂಕರ್ ನಾಯ್ಕ್ ಮಾತನಾಡಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರಗಳಂದು ಮನೋಚೈತನ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ತಾಲ್ಲೂಕಿನಲ್ಲಿ ಮಾನಸಿಕ ಅಸ್ವಸ್ಥಗೊಂಡ ಅಪರಿಚಿತ ವ್ಯಕ್ತಿಗಳಿಗೆ ವಿವಿಧ ಇಲಾಖೆ ವತಿಯಿಂದ 5 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಡಿಮ್ಹಾನ್ಸ್ ಧಾರವಾಡ ಆಸ್ಪತ್ರೆ ಕಳುಹಿಸಿ ಅವರು ಗುಣಮುಖಗೊಂಡ ನಂತರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ. ಆಪ್ತ ಸಮಾಲೋಚನೆ ಪಡೆಯಲು ಉಚಿತ ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಬಹುದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.