ADVERTISEMENT

‘ಬಳ್ಳಾರಿಗೆ ಹನಿ ಹಾಲೂ ಕಳಿಸಲ್ಲ’

ಪ್ರತ್ಯೇಕ ಡೇರಿ ಸ್ಥಾಪನೆಗೆ ಹಾಲು ಉತ್ಪಾದಕರ ಆಗ್ರಹ: ಪಾದಯಾತ್ರೆಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 15:12 IST
Last Updated 23 ಏಪ್ರಿಲ್ 2025, 15:12 IST
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಹಾಲು ಉತ್ಪಾದಕರಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು
ಹೊಸಪೇಟೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಹಾಲು ಉತ್ಪಾದಕರಿಂದ ಗುರುವಾರ ಬೃಹತ್ ಪ್ರತಿಭಟನೆ ನಡೆಯಿತು   

ಹೊಸಪೇಟೆ (ವಿಜಯನಗರ): ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಜಿಲ್ಲೆಗಳನ್ನು ಒಳಗೊಂಡ ಹಾಲು ಒಕ್ಕೂಟದಲ್ಲಿ ಅತ್ಯಧಿಕ ಹಾಲು ಉತ್ಪಾದಿಸುವ ಜಿಲ್ಲೆ ವಿಜಯನಗರ. ಇಲ್ಲಿಗೆ ಹೆಚ್ಚು ನಿರ್ದೇಶಕರ ಸ್ಥಾನ, ಮೇಗಾ ಡೇರಿ ನೀಡದಿದ್ದರೆ ಹನಿ ಹಾಲನ್ನೂ ಬಳ್ಳಾರಿಗೆ ಕಳುಹಿಸಲಾಗದು ಎಂಬ ಒಕ್ಕೊರಲ ನಿರ್ಧಾರಕ್ಕೆ ಹಾಲು ಉತ್ಪಾದಕರು ಬಂದಿದ್ದಾರೆ.

ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಸ್ಥಾಪಿಸಬೇಕು, ಹೊಸಪೇಟೆಯಲ್ಲಿ ಮೆಗಾ ಡೇರಿ ನಿರ್ಮಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಗುರುವಾರ ಇಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಧರಣಿಯಲ್ಲಿ ಹಾಲು ಉತ್ಪಾದಕರು ಈ ನಿರ್ಧಾರ ಕೈಗೊಂಡರು. ಬಳ್ಳಾರಿಗೆ ಬೃಹತ್ ಪಾದಯಾತ್ರೆ ನಡೆಸಿ ಬೆದರಿಕೆ ತಂತ್ರಕ್ಕೆ ಸೆಡ್ಡು ಹೊಡೆಯಲು ತೀರ್ಮಾನಿಸಿದರು.

ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಬಸವರಾಜ್‌ ಕುಕ್ಕಪ್ಪಿ ಮಾತನಾಡಿ, ‘ಬಳ್ಳಾರಿಯಲ್ಲಿ ಹಾಲು ಒಕ್ಕೂಟಗಳನ್ನು ಹೆಚ್ಚಿಸಿಲ್ಲ. ಹಾಲು ಉತ್ಪಾದನೆ ಹೆಚ್ಚಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಅಧಿಕಾರ ಮಾತ್ರ ತಮಗೇ ಬೇಕು ಎಂಬ ಧೋರಣೆ ಇದೆ. ಇದನ್ನು ಒಪ್ಪಲಾಗದು, ಒಂದು ಹನಿ ಹಾಲು ಸಹ ಜಿಲ್ಲೆಯಿಂದ ಬಳ್ಳಾರಿಗೆ ಹೋಗದಂತೆ ಹಾಲು ಉತ್ಪಾದಕರು ತೀರ್ಮನಿಸಿದರೆ ಬಳ್ಳಾರಿಯಲ್ಲಿ ಯಾವ ಆಟವೂ ನಡೆಯದು. ಹೀಗಾಗಿ ಇದೇ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ಗಟ್ಟಿ ಮಾಡಲಾಗುವುದು’ ಎಂದರು.

ADVERTISEMENT

ರೈತ ಸಂಘದ ಮುಖಂಡ ವೀರಸಂಗಯ್ಯ ಮಾತನಾಡಿ, ‘ಕೆಎಂಎಫ್‌ ಅಧ್ಯಕ್ಷರಾಗಿ ಭೀಮಾ ನಾಯ್ಕ್ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ಬಳ್ಳಾರಿಯಲ್ಲಿ ಅವರನ್ನೇ ಅವಮಾನಿಸುವ ರೀತಿಯಲ್ಲಿ ಬೆಳವಣಿಗೆ ನಡೆದಿದೆ. ಬಳ್ಳಾರಿ ಕಾಲಿಟ್ಟರೆ ಹುಶಾರ್ ಎಂಬ ಅಪ್ರಬುದ್ಧ ಬೆದರಿಕೆಯನ್ನೂ ನೀಡಲಾಗಿದೆ. ಇದಕ್ಕಾಗಿಯೇ ಬಳ್ಳಾರಿಗೆ ಬೃಹತ್ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

ಹಾಲು ಒಕ್ಕೂಟದ ನಿರ್ದೇಶಕ ಮರುಳಸಿದ್ದಪ್ಪ ಮಾತನಾಡಿ, ‘ಹೊಸಪೇಟೆಯಲ್ಲಿ ₹40 ಕೋಟಿ ವೆಚ್ಚದಲ್ಲಿ ಪಶು ಆಹಾರ ಉತ್ಪಾದನಾ ಘಟಕ ನಿರ್ಮಾಣವಾಗುತ್ತಿದ್ದು, ಕೆಲವೇ ದಿನಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಭೀಮಾ ನಾಯ್ಕ್ ಅವರು ಮಾಡುತ್ತಿರುವ ಉತ್ತಮ ಕೆಲಸವನ್ನು ಸಹಿಸಿಕೊಳ್ಳಲಾರದೆ ಅನಗತ್ಯ ಟೀಕೆ ಮಾಡಲಾಗುತ್ತಿದೆ’ ಎಂದರು.

ಇದಕ್ಕೂ ಮುನ್ನ ಅಂಬೇಡ್ಕರ್ ಪ್ರತಿಮೆ, ಸಿದ್ದಿಪ್ರಿಯ ಕಲ್ಯಾಣಮಂಟಪ ಬಳಿಯ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ರೈತ ಮುಖಂಡರು ಮಾಲಾರ್ಪಣೆ ಮಾಡಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹಾಲು ಉತ್ಪಾದಕರು, ಪ್ರತ್ಯೇಕ ಹಾಲು ಒಕ್ಕೂಟ, ಮೆಗಾ ಡೇರಿಗಾಗಿ ಘೋಷಣೆ ಕೂಗಿದರು. ಹಾಲಿನ ಕ್ಯಾನ್‌ ತಲೆ ಮೇಲೆ ಇಟ್ಟು ಪ್ರತಿಭಟನೆ ನಡೆಸಿದ್ದು ಗಮನ ಸೆಳೆಯಿತು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಕಳುಹಿಸಲಾಯಿತು.

ಬಳ್ಳಾರಿ ಡೇರಿಗೆ ಕಂಪ್ಲಿಯಿಂದ ವಿರೋಧ

‘ನಮಗೆ ಬಳ್ಳಾರಿ ಹಾಲು ಒಕ್ಕೂಟದ ಸಹವಾಸವೇ ಬೇಡ. 60 ಕಿ.ಮೀ. ದೂರದ ಬಳ್ಳಾರಿ ಬದಲಿಗೆ 25 ಕಿ.ಮೀ. ದೂರದ ಹೊಸಪೇಟೆಗೆ ಹಾಲು ನೀಡುತ್ತೇವೆ. ಹೊಸಪೇಟೆಯಲ್ಲೇ ಮೆಗಾ ಡೇರಿ ನಿರ್ಮಾಣವಾಗಲಿ’ ಎಂದು ಕಂಪ್ಲಿಯ ಹಾಲು ಉತ್ಪಾದಕ ಹಾಗೂ ರೈತ ಮುಖಂಡ ಗಂಗಾಧರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.