ಹೊಸಪೇಟೆ (ವಿಜಯನಗರ): ‘ವರ್ಕ್ ಆರ್ಡರ್ ಇಲ್ಲದೇ ಸಂತೋಷ್ ಪಾಟೀಲ್ಗೆ ಕೆಲಸ ಕೊಟ್ಟಿದ್ದನ್ನು ಆ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಕೇಳಬೇಕಿತ್ತು’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ತೆಂಗಿನಕಾಯಿ, ಅಶ್ವತ್ಥನಾರಾಯಣ ಹೇಳಿದರು.
ಗುರುವಾರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕಾಮಗಾರಿ ಕೈಗೆತ್ತಿಕೊಳ್ಳುವುದಕ್ಕೆ ಪ್ರಸ್ತಾವ ಸಲ್ಲಿಸಿದ್ದು ಯಾರು? ಅನುಮತಿ ಕೊಟ್ಟಿದ್ದು ಯಾರು? ₹4 ಕೋಟಿ ಕೆಲಸ ಮಾಡಲು ವರ್ಕ್ ಆರ್ಡರ್ ಇತ್ತಾ? ಈ ಪ್ರಶ್ನೆಗಳನ್ನು ಕೇಳುವುದು ಲಕ್ಷ್ಮಿ ಅವರ ಕರ್ತವ್ಯವಾಗಿತ್ತು. ಆದರೆ, ಅವರು ಆ ಕೆಲಸ ಮಾಡಿಲ್ಲ. ಬದಲಾಗಿ ಕಾಂಗ್ರೆಸ್ನವರು ಬಿಜೆಪಿಯನ್ನು ಪ್ರಶ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಆರೋಪ ಮಾಡಲು ಏನಾದರೂ ಇರಬೇಕು. ಇದು ಈಶ್ವರಪ್ಪ ವಿರುದ್ಧದ ಕಾಂಗ್ರೆಸ್ ಟೂಲ್ಕಿಟ್. ಸಂತೋಷ್ ಪಾಟೀಲ ಸಾವಿನ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಿದರೂ ಸಹಕಾರ ಕೊಡಲು ಸಿದ್ಧ ಎಂದು ಈಶ್ವರಪ್ಪ ಈಗಾಗಲೇ ಹೇಳಿದ್ದಾರೆ. ಆದರೆ, ಕಾಂಗ್ರೆಸ್ನವರು ಇದನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ. ಈಗಾಗಲೇ ತನಿಖೆ ಆರಂಭವಾಗಿದ್ದು, ಈ ಹಂತದಲ್ಲಿ ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.