ಹರಪನಹಳ್ಳಿ (ವಿಜಯನಗರ ಜಿಲ್ಲೆ): ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ನೀಲಗುಂದ ಗ್ರಾಮದಲ್ಲಿ ಬುಧವಾರ ನಡೆದಿದೆ.
ನೀಲಗುಂದ ಗ್ರಾಮದ ಭವ್ಯ (40) ಹಾಗೂ ಅವರ ಮಕ್ಕಳಾದ ಕಾವ್ಯ (17), ಅಮೂಲ್ಯ (15) ಮೃತಪಟ್ಟವರು. ಒಂದು ಕೋಣೆಯಲ್ಲಿ ಭವ್ಯ ಮತ್ತು ಅಮೂಲ್ಯ, ಇನ್ನೊಂದರಲ್ಲಿ ಕಾವ್ಯ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾವ್ಯ ಹರಪನಹಳ್ಳಿ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ, ಅಮೂಲ್ಯ ನೀಲಗುಂದ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ‘ನಂದಿಬೇವೂರು ಗ್ರಾಮದ ಭವ್ಯ ಅವರಿಗೆ 19 ವರ್ಷಗಳ ಹಿಂದೆ ನೀಲಗುಂದ ಗ್ರಾಮದ ಹರಿಪುರದ ಈರಣ್ಣ ಅವರಿಗೆ ಕೊಟ್ಟು ವಿವಾಹ ಮಾಡಲಾಗಿತ್ತು.
‘ಭವ್ಯ ಅವರು ಕೆಲವು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಈರಣ್ಣ ಮದ್ಯದ ದಾಸರಾಗಿದ್ದರು. ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಇದು ಭವ್ಯ ಅವರನ್ನು ಮತ್ತಷ್ಟು ಖಿನ್ನತೆಗೆ ತಳ್ಳಿತು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ಮಕ್ಕಳೊಂದಿಗೆ ನೇಣು ಹಾಕಿಕೊಂಡಿದ್ದಾರೆ. ಭವ್ಯ ಅವರ ತಾಯಿ ಪಾರ್ವತಮ್ಮ ಅವರು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ನಮ್ಮ ಸಾವಿಗೆ ನಾವೇ ಕಾರಣ ಎಂದು ಬರೆದಿರುವ ಪುಸ್ತಕ ಸ್ಥಳದಲ್ಲಿ ದೊರೆತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.