ಹರಪನಹಳ್ಳಿ (ವಿಜಯನಗರ ಜಿಲ್ಲೆ): ಚಿತ್ರದುರ್ಗದ ಮುರುಘಾ ಮಠದಲ್ಲಿ ನಡೆದಿದೆ ಎನ್ನಲಾದ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಸಾಹಿತಿ ಕುಂ.ವೀರಭದ್ರಪ್ಪ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಘಟನೆ ನ್ಯಾಯ, ಅನ್ಯಾಯವನ್ನು ಪರಿಶೀಲಿಸಿ ಸರ್ಕಾರ ಮತ್ತು ನ್ಯಾಯಾಂಗ ಪ್ರಾಮಾಣಿಕ ನಿರ್ಧಾರವನ್ನು ಪ್ರಕಟಿಸಬೇಕು ಎಂದರು.
ಘಟನೆಯಲ್ಲಿ ಒಂದು ವೇಳೆ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ನಿಜವಾಗಿದ್ದರೆ ಅದನ್ನು ನಾನು ಸಹ ಖಂಡಿಸುತ್ತೇನೆ. ಯಾವುದೇ ಮಠದಲ್ಲಿ ಇಂತಹ ಘಟನೆ ನಡೆಯಬಾರದು. ಇಂತಹ ಪ್ರಕರಣಗಳಿಂದ ಮಠ, ಮಾನ್ಯಗಳು ಮೌಲ್ಯ ಕಳೆದುಕೊಳ್ಳುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಮಠಗಳಿಗೆ ಸ್ವಾಮಿಗಳಾಗುವವರು ವಿವಾಹಿತರು ಆಗುವುದು ಒಳಿತು. ಮುಂದಿನ ದಿನಗಳಲ್ಲಿ ಕುಟುಂಬ ನಿಯಂತ್ರಣದಲ್ಲಿ ಒಳಪಟ್ಟವರನ್ನೆ ಮಠಗಳಿಗೆ ಪೀಠಾಧಿಪತಿ ಮಾಡಿದರೆ ಸೂಕ್ತ ಅನಿಸುತ್ತದೆ. ಸಾಹಿತಿ, ಪತ್ರಕರ್ತ ಪಿ.ಸಾಯಿನಾಥ ಅವರು ಮಠದಿಂದ ಸ್ವೀಕರಿಸಿದ ಬಸವ ಶ್ರೀ ಪ್ರಶಸ್ತಿಯನ್ನು ವಾಪಸ್ ನೀಡಲು ಮುಂದಾಗಿದ್ದಾರೆ. ಪ್ರಶಸ್ತಿಯನ್ನು ಸ್ವಾಮಿಗಳು ನೀಡಿಲ್ಲ. ಮಠ ನೀಡಿದೆ. ಅದನ್ನು ವಾಪಸ್ ನೀಡುವುದಾದರೆ, ಸಂತ್ರಸ್ತ ಮಕ್ಕಳಿಗೆ ಹಣ ನೀಡಲಿ, ಅವರ ಶಿಕ್ಷಣಕ್ಕೆ ನೆರವಾಗುತ್ತದೆ ಎಂದು ಸಲಹೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.