ಹೊಸಪೇಟೆ (ವಿಜಯನಗರ): ‘ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವನ್ನು ‘ಸೇವಾ ಪಾಕ್ಷಿಕ’ವಾಗಿ ಆಚರಿಸಲು ಬಿಜೆಪಿ ತೀರ್ಮಾನಿಸಿದೆ’ ಎಂದು ಪಕ್ಷದ ಜಿಲ್ಲಾ ವಕ್ತಾರ ಅನಂತ ಪದ್ಮನಾಭ ತಿಳಿಸಿದರು.
ಸೆ. 17ರಂದು ಮೋದಿಯವರ ಜನ್ಮದಿನ ಇದೆ. ಅಂದಿನಿಂದ ಅ. 2ರ ಗಾಂಧಿ ಜಯಂತಿ ವರೆಗೆ ನಿತ್ಯ ಒಂದೊಂದು ಕಾರ್ಯಕ್ರಮ ಸಂಘಟಿಸಲಾಗುವುದು ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.
ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರ, ಕೆರೆ, ನದಿ ಸ್ವಚ್ಛತೆ, ಐದು ಜನ ಕ್ಷಯರೋಗಿಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುತ್ತದೆ. ಪತ್ರಿಕಾ ವಿತರಕರ ಆರೋಗ್ಯ ತಪಾಸಣೆ, ಅಂಗವಿಕಲರ ಕೃತಕ ಕಾಲು ಜೋಡಣೆ, ಬೂತ್ ಮಟ್ಟದಲ್ಲಿ ಸಸಿ ನೆಡುವ ಕಾರ್ಯಕ್ರಮ, ಮಳೆ ನೀರು ಸಂಗ್ರಹದ ಅರಿವು, ವಿವಿಧತೆಯಲ್ಲಿ ಏಕತೆ ಹೆಸರಿನಲ್ಲಿ ಸರ್ವರನ್ನೂ ಜೋಡಿಸುವ ಕೆಲಸ ಕಾರ್ಯಕರ್ತರು ಮಾಡುವರು ಎಂದು ವಿವರಿಸಿದರು.
ಸೆ. 25ರಂದು ‘ಮನ್ ಕೀ ಬೂತ್’ ಕಾರ್ಯಕ್ರಮ ನಡೆಯಲಿದೆ. ಅ. 2ರಂದು ಬಿಜೆಪಿಯ ಕಾರ್ಯಕರ್ತರು ಸ್ವದೇಶಿ ವಸ್ತುಗಳನ್ನು ಖರೀದಿಸಿ ಅದನ್ನು ಪ್ರೋತ್ಸಾಹಿಸಲು ಪ್ರಚಾರ ಮಾಡುವರು. ಮೋದಿಯವರ ಎಂಟು ವರ್ಷದ ಆಡಳಿತ, ಸಾಧನೆ ಬಗ್ಗೆ ಜನರಿಗೆ ತಿಳಿಸಿಕೊಡಲಾಗುವುದು ಎಂದು ಹೇಳಿದರು.
ಜಿಲ್ಲಾ ಮಾಧ್ಯಮ ಸಂಚಾಲಕ ಸತ್ಯನಾರಾಯಣ, ಮಾಧ್ಯಮ ಸಹ ಸಂಚಾಲಕ ಬಸವರಾಜ ಕರ್ಕಿಹಳ್ಳಿ, ತಾಲ್ಲೂಕು ಮಾಧ್ಯಮ ಸಂಚಾಲಕಿ ಅನುರಾಧ, ಮಂಡಲ ಅಧ್ಯಕ್ಷ ಕಾಸೆಟ್ಟಿ ಉಮಾಪತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.