ಹೊಸಪೇಟೆ (ವಿಜಯನಗರ): ‘ರೈತರು, ಕಾರ್ಮಿಕರು, ವಿದ್ಯಾರ್ಥಿ ಯುವಜನರು, ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆ, ಕೋಮುವಾದದ ವಿರುದ್ಧ ಹೋರಾಡಲು ನೇತಾಜಿ ಸುಭಾಷಚಂದ್ರ ಬೋಸ್ ಅವರ ವಿಚಾರಗಳು ಹೆಚ್ಚು ಅವಶ್ಯಕ’ ಎಂದು ‘ಆಲ್ ಇಂಡಿಯಾ ಡೆಮೊಕ್ರಟಿಕ್ ಯುತ್ ಆರ್ಗನೈಜೇಶನ್ (ಎಐಡಿವೈಒ) ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಉದ್ಬಾಳ್ ತಿಳಿಸಿದರು.
ಎಐಡಿವೈಒ ಸಂಘಟನೆಯಿಂದ ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮವಾರ್ಷಿಕ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ಬಡತನ, ನಿರುದ್ಯೋಗ, ಸಾಂಸ್ಕೃತಿಕ ಅಧಃಪತನ, ಕೋಮುವಾದವನ್ನು ನೇತಾಜಿ ಅವರ ವಿಚಾರಧಾರೆಗಳ ಮೂಲಕ ಎದುರಿಸಬೇಕಿದೆ. ಧರ್ಮದ ಅಮಲು, ಹಣದ ಹಂಗಿನಲ್ಲಿ ಒಳಗಾಗದೆ ನೈಜ ಮನುಷ್ಯನಾಗಿ ಬದುಕಬೇಕಿದೆ. ನೇತಾಜಿಯವರು ಧರ್ಮ, ಕೋಮುವಾದದ ಕಟು ವಿರೋಧಿಯಾಗಿದ್ದರು. ಧರ್ಮವನ್ನು ರಾಜಕೀಯದಿಂದ ದೂರ ಇರಿಸಬೇಕು. ಧರ್ಮ ವ್ಯಕ್ತಿಯ ವೈಯಕ್ತಿಕ ಸಂಗತಿಯಾಗಿ ಇರಬೇಕು ಎನ್ನುವ ನಿಲುವನ್ನು ಹೊಂದಿದ್ದರು ಎಂದು ವಿವರಿಸಿದರು.
ಜಿಲ್ಲಾಧ್ಯಕ್ಷ ಪ್ರಶಾಂತ್ ಬಡಿಗೇರ್, ಜಿಲ್ಲಾ ಕಾರ್ಯದರ್ಶಿ ಪಂಪಾಪತಿ ಮಾತನಾಡಿ, ಕೋಮುವಾದ, ಧಾರ್ಮಿಕ ಅಂಧಾಭಿಮಾನ, ವ್ಯಕ್ತಿ ಪೂಜೆ ಮಟ್ಟಹಾಕಿ ಬಡತನ, ನಿರುದ್ಯೋಗದ ವಿರುದ್ಧ ಹೋರಾಟ ನಡೆಸಿ, ಶೋಷಣೆಯಿಂದ ಹೊರಬರುವ ಅಗತ್ಯವಿದೆ ಎಂದು ತಿಳಿಸಿದರು.
ಸಂಘಟನೆಯ ಜಿಲ್ಲಾ ಸಮಿತಿ ಸದಸ್ಯರಾದ ಪ್ರಕಾಶ್ ಬಸವನದುರ್ಗ, ಶೇಖರ್ಬಾಬು, ಅಜ್ಜಯ್ಯ ಬೊಮ್ಮಗಟ್ಟ, ಜಿಲ್ಲಾ ಉಪಾಧ್ಯಕ್ಷ ಎರ್ರಿಸ್ವಾಮಿ ಇದ್ದರು. ಪಾಲಾಕ್ಷ ಹಡಗಲಿ ಕ್ರಾಂತಿ ಗೀತೆ ಹಾಡಿದರು. ಇದಕ್ಕೂ ಮುನ್ನ ನಗರದಲ್ಲಿ ನಡೆದ ರ್ಯಾಲಿಯಲ್ಲಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.