ADVERTISEMENT

ಕತ್ತಲಿನಿಂದ ಬೆಳಕಿನೆಡೆಗೆ ‘ಮೆರವಣಿಗೆ’

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 16:44 IST
Last Updated 4 ಏಪ್ರಿಲ್ 2021, 16:44 IST
ಹೊಸಪೇಟೆಯಲ್ಲಿ ಭಾನುವಾರ ಸಂಜೆ ಪ್ರದರ್ಶನ ಕಂಡ ‘ಮೆರವಣಿಗೆ’ ನಾಟಕದ ಒಂದು ದೃಶ್ಯ
ಹೊಸಪೇಟೆಯಲ್ಲಿ ಭಾನುವಾರ ಸಂಜೆ ಪ್ರದರ್ಶನ ಕಂಡ ‘ಮೆರವಣಿಗೆ’ ನಾಟಕದ ಒಂದು ದೃಶ್ಯ   

ಹೊಸಪೇಟೆ (ವಿಜಯನಗರ): ನಿರುದ್ಯೋಗ, ಧರ್ಮಾಂಧತೆ, ಅಸ್ತಿತ್ವ ಕಳೆದುಕೊಳ್ಳುತ್ತಿರುವ ಚಳವಳಿ, ವ್ಯವಸ್ಥೆಯ ಹುಳುಕು, ರಾಜಕೀಯ ವಿಡಂಬನೆ, ಸಮಕಾಲೀನ ಸಮಾಜದ ತವಕ ತಲ್ಲಣ, ಅಸಹಾಯಕರ ಹತಾಶೆ... ಇವೆಲ್ಲದರ ಮಧ್ಯೆ ಬೆಳಕಿನ ಆಶಾಕಿರಣ ಬದುಕಿನ ಉತ್ಸಾಹ ಹೆಚ್ಚಿಸಿ, ಎಲ್ಲ ನೋವು ಮರೆಸುತ್ತದೆ.

ಭಾನುವಾರ ಸಂಜೆ ನಗರದ ಸಂತ ಶಿಶುನಾಳ ಷರೀಫ ರಂಗಮಂದಿರದಲ್ಲಿ ಪ್ರದರ್ಶನ ಕಂಡ ‘ಮೆರವಣಿಗೆ’ಯ ಝಲಕ್‌ಗಳಿವು.

ಭಾವೈಕ್ಯತಾ ವೇದಿಕೆ, ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಶಿವಮೊಗ್ಗದ ಎಚ್‌.ಇ. ಫೌಂಡೇಶನ್‌ ಸಹಭಾಗಿತ್ವದಲ್ಲಿ ಯುವರಂಗ ತರಬೇತಿ ಶಿಬಿರದ ಸಮಾರೋಪದಲ್ಲಿ ನಾಟಕ ಪ್ರದರ್ಶನ ಕಂಡಿತು. 51 ದಿನ ನಡೆದ ಶಿಬಿರದಲ್ಲಿ ತರಬೇತಿ ಪಡೆದ 25 ವಿದ್ಯಾರ್ಥಿಗಳು ಅವರಿಗೆ ವಹಿಸಿದ ಪಾತ್ರದಲ್ಲಿ ಪ್ರವೇಶ ಮಾಡಿ, ‘ಮೆರವಣಿಗೆ’ಯ ದರ್ಶನ ಮಾಡಿಸಿದರು. ಕತ್ತಲೆಯೊಂದಿಗೆ ಆರಂಭವಾಗುವ ನಾಟಕ, ಬೆಳಕಿನೊಂದಿಗೆ ಅಂತ್ಯಗೊಳ್ಳುವುದು ವಿಶೇಷ.

ADVERTISEMENT

ಸಮಾರೋಪ ಉದ್ಘಾಟಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪ್ರೊ. ಆರ್‌. ಭೀಮಸೇನ, ‘ನಾಟಕ ದೈನಂದಿನ ಜೀವನದ ಒಂದು ಭಾಗ. ಬಂಧುತ್ವ, ಸಹೋದರತ್ವ ಬೆಳೆಸುವ ಗುಣ ರಂಗಭೂಮಿಯಲ್ಲಿದೆ. ನಾಟಕದ ಆಳ–ಅಗಲ ಗೊತ್ತಿಲ್ಲದವರು ಪ್ರಯೋಗಕ್ಕೆ ಮುಂದಾಗಿರುವುದು ವಿಶೇಷ. ಅಕಾಡೆಮಿಗಳು ಸಾಂಕೇತಿಕವಾಗಿ ನಾಟಕಗಳನ್ನು ಪ್ರೋತ್ಸಾಹಿಸುತ್ತವೆ. ಆದರೆ, ಅದರ ನಿಜವಾದ ವಾರಸುದಾರರು ರಂಗಕರ್ಮಿಗಳು, ಕಲಾವಿದರು’ ಎಂದರು.

ಸಾಹಿತಿ ಮೃತ್ಯುಂಜಯ ರುಮಾಲೆ ಮಾತನಾಡಿ, ‘ಒಂದು ಕಾಲದಲ್ಲಿ ಇಡೀ ದಕ್ಷಿಣ ಭಾರತದಲ್ಲೇ ಬಳ್ಳಾರಿ ಜಿಲ್ಲೆ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿತ್ತು. ಆ ಶ್ರೀಮಂತ ಪರಂಪರೆ ಇಂದಿಗೂ ಅನೇಕ ರಂಗಕರ್ಮಿಗಳು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ’ ಎಂದು ಹೇಳಿದರು.

ವೇದಿಕೆಯ ಸಂಚಾಲಕ ಪಿ. ಅಬ್ದುಲ್‌, ನಿರ್ದೇಶಕರಾದ ರಿಯಾಜ್‌ ಸಿಹಿಮೊಗೆ, ಪಿ. ಸಹನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.