ಹೊಸಪೇಟೆ (ವಿಜಯನಗರ): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದಲ್ಲಿ ಬಲವಂತದಿಂದ ಭೂಸ್ವಾಧೀನ ಮಾಡುವ ಕೆಐಎಡಿಬಿ ಕ್ರಮ ವಿರುದ್ಧ ಜೂನ್ 25ರಂದು ಸಂಯುಕ್ತ ಹೋರಾಟ ಕರ್ನಾಟಕ ಹಮ್ಮಿಕೊಂಡಿರುವ ದೇವನಹಳ್ಳಿ ಚಲೋಗೆ ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ವ್ಯಕ್ತಪಡಿಸಿದೆ.
ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಗೋಣಿಬಸಪ್ಪ ಬಂಗೇರ್ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಪೊರೇಟ್ ಭೂ ಕಬಳಿಕೆ ವಿರುದ್ಧದ ಈ ಹೋರಾಟದಲ್ಲಿ ರೈತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ, ಸಂಘದ ವತಿಯಿಂದ ಉಭಯ ಜಿಲ್ಲೆಗಳ 200 ಮಂದಿ ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.
ಇಡೀ ರಾಜ್ಯದಲ್ಲಿ ಬಲವಂತದ ಭೂಸ್ವಾಧೀನ ವಿರುದ್ಧದ ಹೋರಾಟಕ್ಕೆ ಇದೊಂದು ದಿಕ್ಸೂಚಿ ಒದಗಿಸಲಿದೆ. ಭಾರತೀಯ ಕಿಸಾನ್ ಯೂನಿಯನ್ನ ರಾಕೇಶ್ ಟಿಕಾಯತ್ ಸಹಿತ ಹಲವು ನಾಯಕರು ನಾಲ್ಕು ವರ್ಷಗಳ ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಜೂನ್ 25ರ ಹೋರಾಟ ಬಲವಂತದಿಂದ ಭೂಸ್ವಾಧೀನ ಮಾಡುವುದಿಲ್ಲ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರು ಸಾರುವ ರಣಕಹಳೆ ಆಗಿರುತ್ತದೆ ಎಂದರು.
ಸಂಘದ ತಾಲ್ಲೂಕು ಅಧ್ಯಕ್ಷ ಗಂಟೆ ಸೋಮಶೇಖರ್, ಮುಖಂಡರಾದ ಎಚ್.ಕಾಳಪ್ಪ, ನಾಗೇಂದ್ರಪ್ಪ, ಎಚ್.ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.