ADVERTISEMENT

ಅವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆ; ಎರಡು ಮನೆ ಕುಸಿತ; ಸಂಪರ್ಕ ಕಡಿತ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 8:27 IST
Last Updated 28 ಆಗಸ್ಟ್ 2022, 8:27 IST
   

ಹೊಸಪೇಟೆ (ವಿಜಯನಗರ): ಅವಳಿ ಜಿಲ್ಲೆಗಳಾದ ವಿಜಯನಗರ–ಬಳ್ಳಾರಿಯ ಬಹುತೇಕ ಕಡೆಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ನಸುಕಿನ ಜಾವದ ವರೆಗೆ ಉತ್ತಮ ಮಳೆಯಾಗಿದೆ. ಸತತ ಮಳೆಗೆ ಎರಡು ಮನೆಗಳ ಗೋಡೆಗಳು ಕುಸಿದು ಬಿದ್ದಿವೆ.

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಸಿಡೆಗಲ್ಲು ಗ್ರಾಮ ಹಾಗೂ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಏಣಿಗಿ ಬಸಾಪುರದಲ್ಲಿ ತಲಾ ಒಂದು ಮನೆಗೆ ಹಾನಿಯಾಗಿದೆ.

ಹೊಸಪೇಟೆ ತಾಲ್ಲೂಕಿನಲ್ಲಿ 8.5 ಸೆಂ.ಮೀ, ಕೂಡ್ಲಿಗಿಯಲ್ಲಿ 0.4 ಸೆಂ.ಮೀ, ಹಗರಿಬೊಮ್ಮನಹಳ್ಳಿಯಲ್ಲಿ 3.4 ಸೆಂ.ಮೀ, ಹೂವಿನಹಡಗಲಿಯಲ್ಲಿ 1.18 ಸೆಂ.ಮೀ. ಮಳೆಯಾಗಿದೆ.

ADVERTISEMENT

ಇನ್ನು, ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 5 ಸೆಂ.ಮೀ, ಕುರುಗೋಡಿನಲ್ಲಿ 4.24 ಸೆಂ.ಮೀ, ಸಿರುಗುಪ್ಪದಲ್ಲಿ 0.5 ಸೆಂ.ಮೀ ಹಾಗೂ ಕಂಪ್ಲಿಯಲ್ಲಿ 4.64 ಸೆಂ.ಮೀ ಮಳೆಯಾಗಿದೆ.

ಮನೆ ಗೋಡೆ ಕುಸಿದಿರುವುದು

ಕಂಪ್ಲಿ ತಾಲ್ಲೂಕಿನ ಚಿಕ್ಕಜಾಯಿಗನೂರು–ಬಳ್ಳಾಪುರ ಸಂಪರ್ಕಿಸುವ ನಾರಿಹಳ್ಳ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಚಿಕ್ಕಜಾಯಿಗನೂರು ಬಳಿಯ ಕಾಕಿಹಳ್ಳ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಕಂಪ್ಲಿಗೆ ಹೋಗಿ ಬರಲು ಜನ ತೊಂದರೆ ಅನುಭವಿಸುತ್ತಿದ್ದಾರೆ. ನಾರಿಹಳ್ಳಿ ಮತ್ತು ಕಾಕಿಹಳ್ಳದ ಭತ್ತದ ಗದ್ದೆಗಳು ಜಲಾವೃತವಾಗಿವೆ. ಬಿರುಸಿನ ಮಳೆಗೆ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.

ಶನಿವಾರ ದಿನವಿಡೀ ಬಿಸಿಲು, ಆಗಾಗ್ಗೆ ಮೋಡ ಕವಿದ ವಾತಾವರಣ ಇತ್ತು. ಆದರೆ, 9 ಗಂಟೆ ಸುಮಾರಿಗೆ ಆರಂಭಗೊಂಡ ಬಿರುಸಿನ ಮಳೆ ಎಡೆಬಿಡದೇ ಭಾನುವಾರ ನಸುಕಿನ ಜಾವದ ವರೆಗೆ ಸುರಿದಿದೆ. ಶುಕ್ರವಾವೂ ಇದೇ ರೀತಿ ಮಳೆಯಾಗಿತ್ತು. ಹಗಲಿನಲ್ಲಿ ಬಿಡುವು ಕೊಡುವ ಮಳೆ ರಾತ್ರಿ ಬಿರುಸಾಗಿ ಸುರಿಯುತ್ತಿದೆ. ಭಾನುವಾರ ಬೆಳಿಗ್ಗೆಯಿಂದ ಕಾರ್ಮೋಡ ಕವಿದಿದೆ.

ಜಲಾಶಯದ ಒಳಹರಿವು ಹೆಚ್ಚಳ:105.788 ಟಿ.ಎಂ.ಸಿ ಅಡಿ ನೀರು ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ 103.740 ಟಿ.ಎಂ.ಸಿ. ಅಡಿ ನೀರಿನ ಸಂಗ್ರಹವಿದೆ. ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಪ್ರತಿ ಗಂಟೆಗೆ 66,183 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಇನ್ನು, ಜಲಾಶಯದ ಒಟ್ಟು 33 ಕ್ರಸ್ಟ್‌ಗೇಟ್‌ಗಳ ಪೈಕಿ 28 ಗೇಟ್‌ಗಳಿಂದ 80,750 ಕ್ಯುಸೆಕ್‌ ನೀರು ನದಿಗೆ ಹರಿಸಲಾಗುತ್ತಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಪುರಂದರ ಮಂಟಪ, ಸ್ನಾನಘಟ್ಟ, ಚಕ್ರತೀರ್ಥ ಭಾಗಶಃ ಮುಳುಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.