ADVERTISEMENT

ಹೂವಿನಹಡಗಲಿಯಲ್ಲಿ ಭಾರಿ ಮಳೆ: ಹಳ್ಳದಲ್ಲಿ ಕೊಚ್ಚಿಹೋದ ದಂಪತಿ

ವಿಜಯನಗರ ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 5:53 IST
Last Updated 7 ಜುಲೈ 2021, 5:53 IST
ಮೃತ ಮಲ್ಲಿಕಾರ್ಜುನ, ಸುಮಂಗಲಮ್ಮ ದಂಪತಿ
ಮೃತ ಮಲ್ಲಿಕಾರ್ಜುನ, ಸುಮಂಗಲಮ್ಮ ದಂಪತಿ   

ಹೂವಿನಹಡಗಲಿ/ಹೊಸಪೇಟೆ (ವಿಜಯನಗರ ಜಿಲ್ಲೆ): ಜಿಲ್ಲೆಯ ವಿವಿಧ ಕಡೆ ಮಂಗಳವಾರ ರಾತ್ರಿ ಬಿರುಸಿನ ಮಳೆಯಾಗಿದೆ.

ಹೂವಿನಹಡಗಲಿ ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆ ಸುರಿದಿದ್ದು, ಪಶ್ಚಿಮ ಕಾಲ್ವಿ ಗ್ರಾಮದ ಬಳಿ ರಭಸವಾಗಿ ಹರಿಯುತ್ತಿದ್ದ ಹಳ್ಳದಲ್ಲಿ ಮೋಟಾರ್ ಬೈಕ್ಸಮೇತ ದಂಪತಿ ಕೊಚ್ಚಿ ಹೋಗಿರುವ ದಾರುಣ ಘಟನೆ ಜರುಗಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕು ಮುತ್ಕೂರು ಗ್ರಾಮದ ಮಲ್ಲಿಕಾರ್ಜುನ (55), ಸುಮಂಗಲಮ್ಮ (48) ಮೃತ ದಂಪತಿ. ಮುಂಡರಗಿ ತಾಲ್ಲೂಕಿನ ತಳಕಲ್ಲು ಗ್ರಾಮದ ಸಂಬಂಧಿಗಳ ಮಾತನಾಡಿಸಲು ಬೈಕ್‌ನಲ್ಲಿ ಹೋಗಿದ್ದ ದಂಪತಿ ರಾತ್ರಿ ವಾಪಸ್ ಬರುವಾಗ ಹಳ್ಳದಲ್ಲಿ ಕೊಚ್ಚಿ ಹೋಗಿದ್ದಾರೆ.

ADVERTISEMENT

ರಾತ್ರಿ 10-30ರ ವೇಳೆಗೆ ಮುತ್ಕೂರಿನಲ್ಲಿರುವ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ್ದ ಮಲ್ಲಿಕಾರ್ಜುನ, ಮಳೆ ಕಡಿಮೆಯಾದ ಮೇಲೆ ವಾಪಸ್ ಬರುವುದಾಗಿ ಹೇಳಿದ್ದರು. ಪೂರ್ವಕಾಲ್ವಿ-ಪಶ್ಚಿಮ ಕಾಲ್ವಿ ಗ್ರಾಮಗಳ ಮಧ್ಯದಲ್ಲಿ ರಭಸವಾಗಿ ಹರಿಯುತ್ತಿದ್ದ ಹಳ್ಳವನ್ನು ಬೈಕ್‌ನಲ್ಲಿ ದಾಟುವಾಗ ಕೊಚ್ಚಿ ಹೋಗಿದ್ದಾರೆ.

ಬುಧವಾರ ಬೆಳಿಗ್ಗೆ ಹಳ್ಳದಲ್ಲಿ ಬೈಕ್ ಬಿದ್ದಿರುವುದನ್ನು ಗಮನಿಸಿ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶೋಧ ನಡೆಸಿದಾಗ ಎರಡೂ ಶವಗಳು ಹಳ್ಳದಲ್ಲಿ ಪತ್ತೆಯಾಗಿವೆ. ಸ್ಥಳಕ್ಕೆ ತಂಬ್ರಹಳ್ಳಿ ಪಿಎಸ್ಐ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲೆಯ ಹೊಸಪೇಟೆ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರಿನಲ್ಲಿ ಉತ್ತಮ ಮಳೆಯಾಗಿದೆ. ಕುಂಠಿತಗೊಂಡಿದ್ದ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.