ADVERTISEMENT

ವಿಜಯನಗರ: ರಾಣಿಪೇಟೆ ಕೊಲೆ ಪ್ರಕರಣ; ಆರನೇ ಆರೋಪಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2021, 15:33 IST
Last Updated 12 ನವೆಂಬರ್ 2021, 15:33 IST
ರಾಣಿಪೇಟೆ ಕೊಲೆ ಪ್ರಕರಣ ಸಂಬಂಧ ಆರನೇ ಆರೋಪಿಯನ್ನು ಬಂಧಿಸಿರುವ ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ
ರಾಣಿಪೇಟೆ ಕೊಲೆ ಪ್ರಕರಣ ಸಂಬಂಧ ಆರನೇ ಆರೋಪಿಯನ್ನು ಬಂಧಿಸಿರುವ ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ   

ಹೊಸಪೇಟೆ (ವಿಜಯನಗರ): ನಗರದ ರಾಣಿಪೇಟೆ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರನೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದರೊಂದಿಗೆ ಬಂಧಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ‘ಆರನೇ ಆರೋಪಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ಪಟ್ಟಣದ ನೌಷದ್ ಅಲಿ. ಈತನಿಂದ ₹4.80 ಲಕ್ಷ ಮೌಲ್ಯದ 160 ಗ್ರಾಂ ಚಿನ್ನಾಭರಣ, ₹40 ಸಾವಿರ ನಗದು ಹಣ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್ ಶುಕ್ರವಾರ ಸಂಜೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಅ.22ರಂದು ರಾಣಿಪೇಟೆಯಲ್ಲಿ ಬಟ್ಟೆ ಖರೀದಿಗೆಂದು ಬಂದಿದ್ದ ಆರು ಜನ ಮಹಿಳೆಯೊಬ್ಬರ ಕೊಲೆ ನಡೆಸಿ, ಚಿನ್ನಾಭರಣ, ನಗದು ದೋಚಿಕೊಂಡು ಹೋಗಿದ್ದರು. ಈ ಸಂಬಂಧ ಪಟ್ಟಣ ಠಾಣೆಯಲ್ಲಿ ಕೊಲೆ, ಡಕಾಯಿತಿ ಪ್ರಕರಣ ದಾಖಲಾಗಿತ್ತು. ಐದು ಜನರನ್ನು ಅ.30ರಂದೇ ಬಂಧಿಸಲಾಗಿತ್ತು’ ಎಂದು ತಿಳಿಸಿದರು.

ADVERTISEMENT

ನಕಲಿ ಬಂಗಾರ ಆಮಿಷ–ಮೂವರು ವಶ:‘ಹರಪನಹಳ್ಳಿ ತಾಲ್ಲೂಕಿನಲ್ಲಿ ನಕಲಿ ಚಿನ್ನದ ಆಮಿಷವೊಡ್ಡಿ ಹಣ ದೋಚಿ ಪರಾರಿಯಾಗಿದ್ದ ಮೂವರನ್ನು ಅರಸಿಕೇರೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ಉದ್ಯಾವರ ಗ್ರಾಮದ ರಂಜಿತ್ ಶೆಟ್ಟಿ (32), ಹರಪನಹಳ್ಳಿ ಪಾವನಪುರದ ಪ್ರಶಾಂತ್ ಮೆಂಡ್ರುಗುತ್ತಿ (24) ಹಾಗೂ ಶಿಂಗ್ರಿಹಳ್ಳಿ ದೊಡ್ಡ ತಾಂಡಾದ ಕೆ.ಬಿ.ವೆಂಕಟೇಶ್ (28) ಎಂಬುವರನ್ನು ಬಂಧಿಸಿ ₹2.53 ಲಕ್ಷ ನಗದು, ₹40 ಸಾವಿರ ಮೌಲ್ಯದ ಬೈಕ್ ಮತ್ತು ಮೊಬೈಲನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಕರಣದ ತನಿಖೆಗೆ ಹರಪನಹಳ್ಳಿ ಡಿವೈಎಸ್ಪಿ ಹಾಲಮೂರ್ತಿ ರಾವ್ ನೇತೃತ್ವದಲ್ಲಿ ಸಿಪಿಐ ನಾಗರಾಜ್ ಎಂ.ಕಮ್ಮಾರ್, ಪಿಎಸ್ಐ ಎ.ಕಿರಣಕುಮಾರ್ ಹಾಗೂ ರವಿ ದಾದಾಪುರ, ವಾಸುದೇವ ನಾಯ್ಕ ಅವರನ್ನು ಒಳಗೊಂಡ ತನಿಖಾ ತಂಡ ರಚಿಸಲಾಗಿತ್ತು.

ಯುವಕನ ಆತ್ಮಹತ್ಯೆ; ಶೀಘ್ರ ತನಿಖಾ ವರದಿ:‘ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿಯಲ್ಲಿ ಸೆಲ್ಫಿ ವಿಡಿಯೊ ಮಾಡಿ ಯುವಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತನಿಖೆಯ ಹಂತದಲ್ಲಿದೆ. ಆತ್ಮಹತ್ಯೆಗೆ ಶರಣಾದ ಪ್ರವೀಣ್ ಪತ್ನಿ ಅನಿತಾ ನೀಡಿದ ದೂರಿನನ್ವಯ ತಂಬ್ರಹಳ್ಳಿಯ ಬಾಚಿಗೊಂಡನಹಳ್ಳಿ ಆನಂದ, ಅಕ್ಕಿ ತೋಟೇಶ್, ನಾಗರಾಜ್ ಮತ್ತು ಶಿಲ್ಪಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಹೇಳಿದರು.

‘ಆತ್ಮಹತ್ಯೆಗೆ ಅನೈತಿಕ ಸಂಬಂಧದ ಕಲಹ ಮತ್ತು ಕಿರುಕುಳ ಎಂಬುದು ದೂರಿನಿಂದ ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ಅವರ ಹೆಸರು ಕೇಳಿಬರುತ್ತಿದ್ದು, ಪಿಎಸ್ಐ ರಜೆಯಲ್ಲಿರುವ ಕಾರಣ ಮರಳಿದ ನಂತರ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ’ ಪ್ರಶ್ನೆಗೆ ಅರುಣ್ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.