ಹಂಪಿ (ವಿಜಯನಗರ): ಕಣ್ಣು ರೆಪ್ಪೆಗಳು ಬಡಿಯುತ್ತಿದ್ದಂತೆಯೇ 155 ಕೆ.ಜಿ. ತೂಕದ ಭಾರದ ಗುಂಡನ್ನು ಕ್ಷಣಾರ್ಧದಲ್ಲಿ ಆಳತ್ತೆರದಲ್ಲಿ ಎತ್ತಿ ಒಗೆದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಹಳ್ಳೂರು ಗ್ರಾಮದ ಶೇಖಪ್ಪ ಯಾಳವಾರ ಅವರು ಈ ಮೂಲಕ ಈ ಹಿಂದಿನ ತಮ್ಮದೇ ದಾಖಲೆ ಮುರಿಬಿಬಿಟ್ಟರು.
ಹಂಪಿ ಉತ್ಸವದ ಅಂಗವಾಗಿ ಹೊಸ ಮಲಪನಗುಡಿಯ ವಿದ್ಯಾರಣ್ಯ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ಗುಂಡು ಎತ್ತುವ ಸ್ಪರ್ಧೆಯನ್ನು ವೀಕ್ಷಿಸಲು ಶನಿವಾರ ಜನ ಕಿಕ್ಕಿರಿದು ಸೇರಿದ್ದರು.
ಸತತ ಆರನೇ ಬಾರಿ ಹಂಪಿ ಉತ್ಸವದಲ್ಲಿ ಪ್ರಶಸ್ತಿ ಪಡೆದ 40ರ ಪ್ರಾಯದ ಶೇಖಪ್ಪ 155 ಕೆ.ಜಿ.ತೂಕದ ಗುಂಡನ್ನು 1.97ಸೆಕೆಂಡ್ಗಳಲ್ಲಿ ಎತ್ತಿ ನೆರೆದಿದ್ದವರನ್ನು ಹುಬ್ಬೇರಿಸುವಂತೆ ಮಾಡಿದರು. ಹಿಂದೆ ಇದೇ ಸಾಧನೆಯನ್ನು 3.46 ಸೆಕೆಂಡ್ಗಳಲ್ಲಿ ಮಾಡಿದ್ದರು. ಈ ಪಂದ್ಯದಲ್ಲಿ ನಗದು ಬಹುಮಾನ ₹10 ಸಾವಿರವನ್ನು ತಮ್ಮದಾಗಿಸಿಕೊಂಡರು.
ನೆರೆದಿದ್ದ ನೂರಾರು ಜನ ಪ್ರೇಕ್ಷಕರು ತಮ್ಮಲ್ಲಿ ಮಾತಾಡಿಕೊಳ್ಳುತ್ತಿರುವಾಗಲೇ ಅಖಾಡಕ್ಕಿಳಿದ ಶೇಖಪ್ಪ ನೋಡ ನೋಡುತ್ತಿದ್ದಂತೆಯೇ 155 ಕೆ.ಜಿ.ತೂಕದ ಗುಂಡನ್ನು ಸಲೀಸಾಗಿ ತೊಡೆ ಮೇಲೆರಿಸಿಕೊಂಡು ಭುಜದ ಮೇಲೆತ್ತಿ ಬಟ್ಟೆಯ ಗಂಟಿನಂತೆ ಹಿಂದಕ್ಕೆಸೆದರು. ಆಗ ನೆರೆದಿದ್ದ ಗ್ರಾಮೀಣ ಕ್ರೀಡಾಕೂಟದ ಪ್ರೇಮಿಗಳ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಾರದಹಳ್ಳಿ ಗ್ರಾಮದ ಮರಿಯಪ್ಪ ಅವರು 2.89 ಸೆಕೆಂಡ್ಗಳಲ್ಲಿ 135 ಕೆ.ಜಿ. ಭಾರದ ಗುಂಡು ಎತ್ತುವ ಮೂಲಕ ದ್ವಿತೀಯ ಬಹುಮಾನ ಪಡೆದು ₹5 ಸಾವಿರ ತಮ್ಮದಾಗಿಸಿಕೊಂಡರು. ಅಗಸರ ಮಾರುತಿ ಭಾರಿ ಕಸರತ್ತು ನಡೆಸಿದರಾದರೂ ಗುಂಡು ತೊಡೆಯಿಂದ ಮೇಲಕ್ಕೇರಲಿಲ್ಲ.
ಬಂಡಿ ಗಾಲಿ ಜೋಡಿಸುವ ಸ್ಪರ್ಧೆ: ಹನುಮಂತ ಪ್ರಥಮ
ಬಂಡಿ ಗಾಲಿ ಜೋಡಿಸುವ ಸ್ಪರ್ಧೆಯಲ್ಲಿ ಹೊಸಪೇಟೆಯ ಹನುಮಂತ ಕೇವಲ 1.46 ನಿಮಿಷಗಳಲ್ಲಿ ಬಂಡಿಯಿಂದ ಗಾಲಿ ಬೇರ್ಪಡಿಸಿ ಮತ್ತೆ ಜೋಡಿಸಿ ಪ್ರಥಮ ಬಹುಮಾನ ಪಡೆದರು. ನೆರೆದಿದ್ದ ನೂರಾರು ಜನ ಅವರ ಸಾಹಸಕ್ಕೆ ಜೈಕಾರ ಹಾಕಿ ಚಪ್ಪಾಳೆ ತಟ್ಟಿದರು. ವೆಂಕೋಬ 2.15 ನಿಮಿಷದಲ್ಲಿ ಜೋಡಿಸಿ ದ್ವಿತೀಯ, ದೇವಪ್ಪ 2.25 ನಿಮಿಷದಲ್ಲಿ ಗುರಿ ತಲುಪಿ ತೃತೀಯ ಬಹುಮಾನ ಪಡೆದರು. ಕ್ರಮವಾಗಿ ₹10 ಸಾವಿರ, 5 ಸಾವಿರ, 3 ಸಾವಿರ ನಗದು ಬಹುಮಾನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.