ADVERTISEMENT

ವಿಜಯನಗರ: ಪದವಿ ಪರೀಕ್ಷೆ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 11:36 IST
Last Updated 23 ಜುಲೈ 2021, 11:36 IST
ಭಾರತ ವಿದ್ಯಾರ್ಥಿ ಫೆಡರೇಶನ್‌ ಕಾರ್ಯಕರ್ತರು ಶುಕ್ರವಾರ ಹೊಸಪೇಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಭಾರತ ವಿದ್ಯಾರ್ಥಿ ಫೆಡರೇಶನ್‌ ಕಾರ್ಯಕರ್ತರು ಶುಕ್ರವಾರ ಹೊಸಪೇಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವವರೆಗೆ ಪದವಿ ಪರೀಕ್ಷೆಗಳನ್ನು ನಡೆಸಬಾರದು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರ ರಾಣಿಪೇಟೆಯಲ್ಲಿನ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅನೇಕ ವಿದ್ಯಾರ್ಥಿಗಳು ಇದುವರೆಗೆ ಲಸಿಕೆ ಹಾಕಿಸಿಕೊಂಡಿಲ್ಲ. ಎಲ್ಲರಿಗೂ ಆದ್ಯತೆ ಮೇಲೆ ಲಸಿಕೆ ಹಾಕುವವರೆಗೆ ಪದವಿ ಪರೀಕ್ಷೆ ಯಾವುದೇ ಕಾರಣಕ್ಕೂ ನಡೆಸಬಾರದು ಎಂದು ಸಚಿವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ದೊರೆಯುತ್ತಿಲ್ಲ. ಅನೇಕರ ಕುಟುಂಬಗಳು ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿವೆ. ಅವರಿಗೆ ಹಣ ಪಾವತಿಸಿ ಬಸ್‌ ಪಾಸ್‌ ಪಡೆಯಲು ಆಗುತ್ತಿಲ್ಲ. ಆ ಸಮಸ್ಯೆ ಜಿಲ್ಲಾಡಳಿತವೇ ನೀಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಅಲ್ಲದೇ ಇದುವರೆಗೆ ಸರ್ಕಾರ ಹಾಸ್ಟೆಲ್‌ಗಳನ್ನು ತೆರೆದಿಲ್ಲ. ಗ್ರಾಮೀಣ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಬೇರೆ ವ್ಯವಸ್ಥೆ ಇಲ್ಲ. ಕೆಲ ವಿದ್ಯಾರ್ಥಿಗಳಿಗೆ ಕೋವಿಡ್‌ ಬಂದು ಗುಣಮುಖರಾಗಿದ್ದಾರೆ. ಆದರೆ, ಮೂರು ತಿಂಗಳ ವರೆಗೆ ಅವರು ಲಸಿಕೆ ಪಡೆಯುವಂತಿಲ್ಲ. ಆನ್‌ಲೈನ್‌ ತರಗತಿ ಸಹ ಬಹಳ ದೋಷದಿಂದ ಕೂಡಿವೆ. ಇದರಿಂದಾಗಿ ಪರೀಕ್ಷೆ ರದ್ದುಪಡಿಸುವುದು ಉತ್ತಮ. ಒಂದುವೇಳೆ 1,3 ಮತ್ತು 5ನೇ ಸೆಮಿಸ್ಟರ್‌ ಪರೀಕ್ಷೆ ನಡೆಸಬೇಕೆಂದರೆ 50 ದಿನಗಳ ನಂತರ ನಡೆಸಬೇಕು ಎಂದು ಒತ್ತಾಯಿಸಿದರು.

ಫೆಡರೇಶನ್‌ ತಾಲ್ಲೂಕು ಅಧ್ಯಕ್ಷ ಜೆ. ಶಿವುಕುಮಾರ, ಮುಖಂಡರಾದ ಕೆ.ಎ. ಪವನಕುಮಾರ್‌, ಸಿ.ಆರ್‌. ಭರತ್ ಕುಮಾರ್‌, ಜಿ. ನಂದಿನಿ, ನೇಹಾ ಕೌಸರ್‌, ಕೆ. ವೆಂಕಟೇಶ್‌, ಶ್ವೇತಾ, ಅಫ್ರೋಜ್‌, ಕೆ. ಸ್ನೇಹಾ, ಎನ್‌. ರಂಗಸ್ವಾಮಿ, ವಿಜಯಕುಮಾರ, ಭರತ್ ನಾಯ್ಕ, ಪ್ರಕಾಶ, ಗುರುರಾಜ, ಪ್ರಭುದೇವ, ದರ್ಶನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.