ಹೊಸಪೇಟೆ (ವಿಜಯನಗರ): ಜಿಲ್ಲೆಯಲ್ಲಿ ಕೋವಿಡ್–19 ಸಂಖ್ಯೆ ಬಹಳ ವೇಗವಾಗಿ ಹೆಚ್ಚಾಗುತ್ತಿರುವುದರಿಂದ ಪೊಲೀಸರು ಜನ ಸೇರುವ ಪ್ರದೇಶಗಳಲ್ಲಿ ಗುರುವಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಜನರನ್ನು ಮನೆಗೆ ಕಳುಹಿಸಿದರು.
ನಗರದ ಕಾಲೇಜು ರಸ್ತೆ, ಟಿ.ಬಿ. ಡ್ಯಾಂ ರಸ್ತೆ, ಮೇನ್ ಬಜಾರ್, ರೋಟರಿ ವೃತ್ತ, ಗಾಂಧಿ ವೃತ್ತ, ಕೌಲ್ ಪೇಟೆ, ರಾಣಿಪೇಟೆ ಸೇರಿದಂತೆ ಇತರೆಡೆ ಗುರುವಾರ ಮಧ್ಯಾಹ್ನ ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದರು.
ತರಕಾರಿ, ಹಣ್ಣು, ಹಾಲು, ದಿನಪತ್ರಿಕೆ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಮಿಕ್ಕಳಿದವುಗಳನ್ನು ಬಂದ್ ಮಾಡಿಸಿದರು. ಹೋಟೆಲ್ಗಳಲ್ಲಿ ಜನರನ್ನು ಸೇರಿಸದಂತೆ ಎಚ್ಚರಿಕೆ ನೀಡಿದರು. ಗ್ರಾಹಕರಿಗೆ ಪಾರ್ಸೆಲ್ ಮಾತ್ರ ಕೊಡಬೇಕು ಎಂದು ತಿಳಿಸಿದ್ದರಿಂದ ಬಹುತೇಕ ಹೋಟೆಲ್ಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಕೆಲವರು ಪಾರ್ಸೆಲ್ ತೆಗೆದುಕೊಂಡು, ಮರದಡಿ, ಕಟ್ಟಡಗಳ ನೆರಳಿನ ಅಡಿಯಲ್ಲಿ ನಿಂತುಕೊಂಡು ಆಹಾರ ಸೇವಿಸಿದರು.
ಸರ್ಕಾರಿ ಕಚೇರಿ, ವಾಣಿಜ್ಯ ಮಳಿಗೆ, ಹಣ್ಣು, ಐಸ್ಕ್ರೀಂ ಮಳಿಗೆಗಳ ಎದುರು ಗುಂಪು ಗುಂಪಾಗಿ ನಿಂತಿದ್ದ ಜನರನ್ನು ಅಲ್ಲಿಂದ ಕಳುಹಿಸಿದರು. ಮಾಸ್ಕ್ ಧರಿಸದೆ ಓಡಾಡುತ್ತಿದ್ದವರಿಗೆ ದಂಡ ವಿಧಿಸಿದರು.
ದಿನವಿಡೀ ನಗರದಲ್ಲಿ ಪೊಲೀಸರು ಗಸ್ತು ತಿರುಗಿದರು. ಪ್ರಮುಖ ವೃತ್ತ, ರಸ್ತೆಗಳಲ್ಲಿ ಸಾರ್ವಜನಿಕರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.