ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯಲ್ಲಿ ಹಳೆಯ ಕ್ರೆಸ್ಟ್ಗೇಟ್ಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಭಾನುವಾರ ತುಸು ವೇಗ ದೊರೆತಿದ್ದು, 18ನೇ ಗೇಟ್ನ ಒಂದು ಸಣ್ಣ ಭಾಗವನ್ನು ಕತ್ತರಿಸಿ ಕ್ರೇನ್ನಲ್ಲಿ ಎತ್ತಿ ಹೊರತರುವ ಕೆಲಸ ನಡೆಯಿತು.
ಸದ್ಯ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 1,621.46 ಅಡಿಯಷ್ಟಿದ್ದು (ಗರಿಷ್ಠ 1,633 ಅಡಿ), 18ನೇ ಗೇಟ್ನ ಒಂದು ಭಾಗ ನೀರಿನ ಮಟ್ಟಕ್ಕಿಂತ 10 ಅಡಿಗೂ ಹೆಚ್ಚು ಎತ್ತರದಲ್ಲಿದೆ. ಮೊದಲಿಗೆ ಅದೇ ಗೇಟ್ನ ಒಂದು ಭಾಗವನ್ನು ಕತ್ತರಿಸಿ ತೆಗೆಯಲಾಯಿತು.
ಇದೀಗ ತೆರವು ಕಾರ್ಯ ನಡೆಯುತ್ತಿರುವುದು ಅಣೆಕಟ್ಟೆಯ ಮಧ್ಯಭಾಗದಲ್ಲಿ. ಇದೇ ರೀತಿ ಅಣೆಕಟ್ಟೆಯ ಎಡಭಾಗದ ಗೇಟ್ಗಳನ್ನು ಮತ್ತು ಬಲಭಾಗದ ಗೇಟ್ಗಳನ್ನು ಹಂತ ಹಂತವಾಗಿ ಕತ್ತರಿಸಿ ತೆಗೆಯುವ ಕೆಲಸವೂ ನಡೆಯಲಿದೆ, ಹೀಗೆ ಡಿಸೆಂಬರ್ ಮೂರನೇ ವಾರದ ವೇಳೆಗೆ ಕೆಲವು ಗೇಟ್ಗಳ ಭಾಗಗಳು ತೆರವುಗೊಳ್ಳುವ ನಿರೀಕ್ಷೆ ಇದೆ ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ.
ಅಣೆಕಟ್ಟೆಯ ಮೇಲೆ ಕ್ರೇನ್: ತುಂಗಭದ್ರಾ ಅಣೆಕಟ್ಟೆಯಲ್ಲಿ ಭಾನುವಾರ ಮೊದಲ ಬಾರಿಗೆ ಕ್ರೇನ್ ಕಾಣಿಸಿಕೊಂಡಿತು. 18ನೇ ಗೇಟ್ನ ಒಂದು ಭಾಗವನ್ನು ಗ್ಯಾಸ್ ಕಟ್ಟರ್ನಿಂದ ಕತ್ತರಿಸಿದ ತಕ್ಷಣ ಕ್ರೇನ್ ಮೂಲಕ ಅದನ್ನು ಎತ್ತಿ ಮೇಲಕ್ಕೆ ತರಲಾಯಿತು.
ಸದ್ಯ ಜಲಾಶಯದಲ್ಲಿ 65.52 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹ ಇದ್ದು, ಕಾಲುವೆಗಳಿಗೆ 9,194 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಈ ಮೂಲಕ ಬಹುತೇಕ ಒಂದು ದಿನದಲ್ಲಿ ಒಂದು ಟಿಎಂಸಿ ಅಡಿಯಷ್ಟು ನೀರು ಖಾಲಿಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ಬೆಡ್ ಕಾಂಕ್ರೀಟ್ ಮಟ್ಟವಾದ 43 ಟಿಎಂಸಿ ಅಡಿಗೆ ತಲುಪಲು 20 ದಿನ ಬೇಕು. ಅದಕ್ಕೆ ಮೊದಲಾಗಿ ನದಿಗೆ ನೀರು ಹರಿಸಿ ಆಂಧ್ರ ಮತ್ತು ತೆಲಂಗಾಣದ ನೀರು ಹಂಚಿಕೆ ಕೋಟಾ ಪೂರ್ಣಗೊಳಿಸಿದರೆ ಇನ್ನೂ ವೇಗವಾಗಿ ಜಲಾಶಯದ ನೀರು ಖಾಲಿಯಾಗಲಿದೆ ಎಂದು ಮೂಲಗಳು ತಿಳಿಸಿದ್ದು, ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.