ಹೂವಿನಹಡಗಲಿ: ಪಟ್ಟಣದಲ್ಲಿ ಬೀದಿ ದೀಪಗಳನ್ನು ಅಳವಡಿಸುವ ‘ಕತ್ತಲೆಯಿಂದ ಬೆಳಕಿನೆಡೆಗೆ’ ಯೋಜನೆಗೆ ಶಾಸಕ ಎಲ್.ಕೃಷ್ಣನಾಯ್ಕ ಮಂಗಳವಾರ ಚಾಲನೆ ನೀಡಿದರು.
ಶಾಸ್ತ್ರಿ ವೃತ್ತದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಹಡಗಲಿ ವಿಧಾನಸಭಾ ಕ್ಷೇತ್ರದಾದ್ಯಂತ ಐದು ವರ್ಷದ ವಾರಂಟಿಯ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ. ಪಟ್ಟಣ ಹಾಗೂ ಗ್ರಾಮಾಂತರ ವ್ಯಾಪ್ತಿಯಲ್ಲಿ 18 ಸಾವಿರ ಬೀದಿದೀಪದ ಕಂಬಗಳಿದ್ದು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ₹4 ಕೋಟಿ ಮೊತ್ತದಲ್ಲಿ 6,500 ಎಲ್ಇಡಿ ಬೀದಿದೀಪಗಳನ್ನು ಅಳವಡಿಸಲಾಗುತ್ತಿದೆ’ ಎಂದು ಹೇಳಿದರು.
‘ಪಟ್ಟಣದಲ್ಲಿ 4,000 ಬೀದಿದೀಪ ಕಂಬಗಳಿದ್ದು, ಎರಡು ಸಾವಿರ ಬೀದಿದೀಪ ಅಳವಡಿಸುತ್ತೇವೆ. ಸಂಜೆಯಾಗುತ್ತಲೇ ಸ್ವಯಂಚಾಲಿತವಾಗಿ ಹೊತ್ತಿಕೊಳ್ಳುವ ಬೀದಿದೀಪಗಳು ಬೆಳಿಗ್ಗೆ ಆರಲಿವೆ. ಇದರಿಂದ ವಿದ್ಯುತ್ ಉಳಿತಾಯವಾಗಲಿದ್ದು, ಕ್ಷೇತ್ರದ ಬೀದಿದೀಪ ಸಮಸ್ಯೆ ನಿವಾರಿಸಲು ವಿಶೇಷವಾಗಿ ಈ ಯೋಜನೆ ರೂಪಿಸಿದ್ದೇವೆ’ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್ ಬೀ, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಸದಸ್ಯರಾದ ವಾರದ ಗೌಸ್ ಮೊಹಿದ್ದೀನ್, ಎಸ್.ತಿಮ್ಮಣ್ಣ, ಎಸ್.ಶಫಿವುಲ್ಲಾ, ಚಂದ್ರನಾಯ್ಕ, ವಿಶಾಲಾಕ್ಷಮ್ಮ ಅಂಗಡಿ, ಸಾಂತಮ್ಮ, ಗುತ್ತಿಗೆದಾರ ಮಂಜಪ್ಪ ಹರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.