ಹೊಸಪೇಟೆ (ವಿಜಯನಗರ): ಇಂದಿನಿಂದ ಕೋವಿಡ್ ನಿಷೇಧಾಜ್ಞೆಯ ಹೊಸ ನಿಯಮಗಳು ಜಾರಿಗೆ ಬಂದಿರುವುದರಿಂದ ಪೊಲೀಸರು ನಗರದಲ್ಲಿ ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ.
ವಿವಿಧ ಬಡಾವಣೆಗಳಿಂದ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಿದ್ದಾರೆ. ಪ್ರಮುಖ ವೃತ್ತಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಎಲ್ಲ ಕಡೆ ಗಸ್ತು ತಿರುಗುತ್ತಿದ್ದಾರೆ.
ತುರ್ತು ಸೇವೆ ಹೊರತುಪಡಿಸಿ ಅನಗತ್ಯವಾಗಿ ರಸ್ತೆಗೆ ಇಳಿದವರ ವಾಹನಗಳನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಕಾಲ್ನಡಿಗೆಯಲ್ಲಿ ಓಡಾಡುತ್ತಿರುವವರನ್ನು ವಿಚಾರಿಸುತ್ತಿದ್ದಾರೆ. ಒಂದು ಬಡಾವಣೆಯಿಂದ ಇನ್ನೊಂದು ಬಡಾವಣೆಗೆ ಬಂದವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಿದರು.
ಎಲ್ಲ ರಸ್ತೆಗಳಲ್ಲಿ ಪೊಲೀಸರು ಓಡಾಡುತ್ತಿರುವುದರಿಂದ ಭಾಗಶಃ ವಾಹನ ಸಂಚಾರ ನಿಂತು ಹೋಗಿದೆ. ಕೆಲವರು ದಿನಸಿ ಸೇರಿದಂತೆ ಇತರೆ ವಸ್ತುಗಳನ್ನು ತಲೆ ಮೇಲೆ ಹೊತ್ತುಕೊಂಡು ಹೋದರು.
'ಬಿಗಿ ಕ್ರಮ ಕೈಗೊಳ್ಳುವುದಕ್ಕೆ ಅಭ್ಯಂತರವಿಲ್ಲ. ಆದರೆ, ದಿನಸಿ ಮನೆಗೆ ತೆಗೆದುಕೊಂಡು ಹೋಗಲು ಕಷ್ಟವಾಗುತ್ತದೆ. ಅದರಲ್ಲೂ ನನ್ನಂತಹ ವಯಸ್ಸಾದವರಿಗೆ ಬಹಳ ಸಮಸ್ಯೆ ಆಗುತ್ತದೆ. ಬೆಳಿಗ್ಗೆ ಆರರಿಂದ ಹತ್ತು ಗಂಟೆಯವರೆಗೆ ದ್ವಿಷಕ್ರ ವಾಹನಗಳಲ್ಲಿ ದಿನಸಿ ಕೊಂಡೊಯ್ಯಲು ಅವಕಾಶ ಕಲ್ಪಿಸಬೇಕು. ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕ್ರಮ ಜರುಗಿಸಲಿ' ಎಂದು ಇಲ್ಲಿನ ಕಾಲೇಜು ರಸ್ತೆಯಲ್ಲಿ ದಿನಸಿ ಖರೀದಿಸಿ ಮರಳುತ್ತಿದ್ದ ಬಸವೇಶ್ಬರ ಬಡಾವಣೆಯ ನಿವಾಸಿ ಮಲ್ಲಿಕಾರ್ಜುನ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.