ADVERTISEMENT

ವಿಜಯನಗರ | ಅಜಾಗ್ರತೆಯಿಂದ ಸಾಗುವ ಗಣಿ ಲಾರಿ ಜಪ್ತಿ: ಜಿಲ್ಲಾಧಿಕಾರಿ ಕವಿತಾ

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ- ಡಿ.ಸಿ ಕವಿತಾ.ಆದೇಶ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:29 IST
Last Updated 19 ಅಕ್ಟೋಬರ್ 2025, 7:29 IST
ಹೊಸಪೇಟೆಯಲ್ಲಿ ಶನಿವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು –ಪ್ರಜಾವಾಣಿ ಚಿತ್ರ
ಹೊಸಪೇಟೆಯಲ್ಲಿ ಶನಿವಾರ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಿರುವು ರಸ್ತೆಗಳ, ವಿಭಜಕ ರಸ್ತೆಗಳ ಮಾರ್ಗಸೂಚಕ ನಾಮಫಲಕಗಳನ್ನು ಕಡ್ಡಾಯವಾಗಿ 200 ಮೀಟರ್ ಮುಂಚಿತವಾಗಿಯೇ ಅಳವಡಿಸಬೇಕು ಎಂದು ಹೇಳಿರುವ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ವಿಪರೀತ ವೇಗ, ಅಜಾಗರೂಕತೆಯಿಂದ ಸಂಚರಿಸುವ ಗಣಿ ಲಾರಿಗಳನ್ನು ಮುಟ್ಟುಗೋಲು ಹಾಕಿ ತಮ್ಮ ಕಚೇರಿ ಆವರಣದಲ್ಲಿ ತಂದು ನಿಲ್ಲಿಸಲು ಸೂಚಿಸಿದ್ದಾರೆ.

ಶನಿವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೆದ್ದಾರಿಯಲ್ಲಿ ಈಗಿರುವ ನಾಮಫಲಕಗಳು ಸಂಚರಿಸುವವರಿಗೆ ತೀವ್ರ ಗೊಂದಲ ಮೂಡಿಸುತ್ತವೆ. ತಿರುವುಗಳ ಮುಂದೆ ಫಲಕಗಳನ್ನು ಅಳವಡಿಸಿರುವುದರಿಂದ ಚಾಲಕರಿಗೆ ತೊಂದರೆಯಾಗುತ್ತದೆ, ಇದರಿಂದ ಅಪಘಾತವೂ ಸಂಭವಿಸುತ್ತದೆ. ನಗರ ಸಮೀಪದ ಸುರಂಗ ಮಾರ್ಗದಲ್ಲಿ ತಕ್ಷಣ ಸಿ.ಸಿ.ಟಿ.ವಿ.ಕ್ಯಾಮೆರಾಗಳನ್ನು ಅಳವಡಿಸಬೇಕು ಎಂದರು.

ಹರಪನಹಳ್ಳಿ ಮತ್ತು ಕೂಡ್ಲಿಗಿ ಸೇರಿದಂತೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆಟೋ ಸ್ಟಾಂಡ್ ನಿರ್ಮಾಣ ಮಾಡಲು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ ಮಾಸಾಂತ್ಯದಲ್ಲಿ ಸ್ಥಳ ಗುರುತಿಸಿ ವರದಿ ನೀಡಬೇಕು. ಹೊಸಪೇಟೆ ನಗರದಲ್ಲಿ ಪುನೀತ್ ರಾಜಕುಮಾರ್ ವೃತ್ತದ ಬಳಿ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನ ನಿಲುಗಡೆಗೆ ನಗರಸಭೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಜಂಟಿಯಾಗಿ ಸ್ಥಳ ಪರಿವೀಕ್ಷಣೆ ಮಾಡಿ ಸ್ಥಳ ಗುರುತಿಸಬೇಕು ಎಂದರು.

ADVERTISEMENT

ನಗರದ ಭಟ್ಟರಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ಆಯುಕ್ತರು ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ವಹಿಸಬೇಕು. ಹೊಸಪೇಟೆ ನಗರದ ಆನಂತಶಯನಗುಡಿ ಬಳಿಯಿರುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿರುವುದರಿಂದ ರಸ್ತೆ ಸುಧಾರಣೆ ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು, ನಗರದ ನ್ಯಾಯಾಲಯದ ಮುಂದಿನ ರಸ್ತೆ ಹಾಗೂ ನ್ಯಾಷನಲ್ ಶಾಲೆ ಮತ್ತು ಕಾಲೇಜು ಮುಂದಿನ ರಸ್ತೆಯಲ್ಲಿ ರಸ್ತೆ ತಡೆಗಳನ್ನು ಅಳವಡಿಸಲು ಸ್ಥಳ ಪರಿಶೀಲಿಸಿ ಕ್ರಮ ವಹಿಸಬೇಕೆಂದು ಸೂಚಿಸಿದರು.

ಎಎಸ್‌ಪಿ ಮಂಜುನಾಥ, ಪಿಡಬ್ಲ್ಯುಡಿ ಇಇ ದೇವದಾಸ್, ರಾಷ್ಟೀಯ ಹೆದ್ದಾರಿ ಅಧಿಕಾರಿ ಶಿರೀಷ್‌, ಸಾರಿಗೆ ಅಧಿಕಾರಿ ಧನರಾಜ್ ಇತರರು ಇದ್ದರು.

ತ್ರಿವಳಿ ಸಂಚಾರ–ಕ್ರಮ ಕೈಗೊಳ್ಳಿ

ದ್ವಿಚಕ್ರ ವಾಹನಗಳಲ್ಲಿ ತ್ರಿವಳಿ ಸಂಚಾರ ಬಹಳ ಅಪಾಯಕಾರಿ. ಅಪಘಾತ ಸಂಭವಿಸಿದರೆ ಪರಿಹಾರ ಸಿಗುವುದೂ ಕಷ್ಟ. ಹೀಗಾಗಿ ಇಂತಹ ಸವಾರಿಗೆ ಕಡಿವಾಣ ಹಾಕಬೇಕು. ಕರ್ಕಶ ಹಾರನ್‌ ಶಬ್ದ ಮಾಡುವ ವಾಹನಗಳನ್ನೂ ನಿಯಂತ್ರಿಸಬೇಕು. ಪೊಲೀಸರು ಈ ವಿಷಯದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.