ADVERTISEMENT

ಜೀವ ಬೆದರಿಕೆ ಹಾಕಿರುವ ಸಚಿವ ಆನಂದ್‌ ಸಿಂಗ್‌ ಬಂಧನವೇಕಿಲ್ಲ?: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 13:03 IST
Last Updated 24 ಸೆಪ್ಟೆಂಬರ್ 2022, 13:03 IST
   

ಹೊಸಪೇಟೆ (ವಿಜಯನಗರ): ‘ಪರಿಶಿಷ್ಟ ಜಾತಿ ಕುಟುಂಬದವರಿಗೆ ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುವ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರನ್ನು ಇದುವರೆಗೆ ಬಂಧಿಸದೇ ಇರುವ ಕ್ರಮ ಸರಿಯಲ್ಲ’ ಎಂದು ಮಾಜಿಸಂಸದ ವಿ.ಎಸ್‌. ಉಗ್ರಪ್ಪ ಹೇಳಿದರು.

‘ಭಾರತ್‌ ಜೋಡೋ ಯಾತ್ರೆ’ ಅಂಗವಾಗಿ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯಾವುದೇ ರೀತಿಯ ಅಸ್ಪೃಶ್ಯತೆ ಆಚರಣೆ ಕಾನೂನಿಗೆ ವಿರುದ್ಧವಾದ ನಡೆ. ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿರುವ ಸಚಿವರ ವಿರುದ್ಧ ಪ್ರಕರಣ ದಾಖಲಾಗಿದೆ. ಅವರು ಜಾಮೀನು ಕೂಡ ಪಡೆದಿಲ್ಲ. ಸಂವಿಧಾನಬದ್ಧವಾದ ಸರ್ಕಾರವಿದ್ದರೂ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲವೇಕೇ?’ ಎಂದು ಕೇಳಿದರು.

ಆನಂದ್‌ ಸಿಂಗ್‌ ಅವರು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದಾರೆ. ರಾಜ್ಯ ಸರ್ಕಾರವಾಗಲಿ, ಜಿಲ್ಲಾಡಳಿತವಾಗಲಿ ಕ್ರಮ ಕೈಗೊಳ್ಳಲು ಹಿಂದೇಟು ಏಕೆ ಹಾಕುತ್ತಿವೆ. ಕಣ್ಮುಚ್ಚಿ ಕುಳುತಿರುವುದೇಕೇ? ಈ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೇ? ವಿಜಯನಗರ ಅಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೇ ರೀತಿ ಧೋರಣೆ ಹೊಂದಿದೆ ಎಂದು ಕುಟುಕಿದರು.

ADVERTISEMENT

ರಾಹುಲ್‌ ಗಾಂಧಿಯವರ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಎರಡನೇ ವಾರ ಬಳ್ಳಾರಿ ಜಿಲ್ಲೆಗೆ ಬರಲಿದ್ದು, ಅದರಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀಧರ ಬಾಬು, ರಾಜ್ಯಸಭೆ ಸದಸ್ಯರಾದ ಎಲ್.ಹನುಮಂತಯ್ಯ, ಸೈಯದ್‌ ನಾಸೀರ್‌ ಹುಸೇನ್‌, ಜಿಲ್ಲಾ ಅಧ್ಯಕ್ಷರಾದ ಬಿ.ವಿ. ಶಿವಯೋಗಿ, ಮಹಮ್ಮದ್‌ ರಫೀಕ್‌, ಮುಖಂಡರಾದ ಅನಿಲ್ ಲಾಡ್, ಆರ್‌.ಮಂಜುನಾಥ್, ಮಹಮ್ಮದ್‌ ಇಮಾಮ್ ನಿಯಾಜಿ, ರಘು ಗುಜ್ಜಲ್‌, ಗುಜ್ಜಲ್‌ ನಾಗರಾಜ್, ರಾಜಶೇಖರ್ ಹಿಟ್ನಾಳ್‌, ನಿಂಬಗಲ್‌ ರಾಮಕೃಷ್ಣ, ವಿನಾಯಕ್‌ ಶೆಟ್ಟರ್‌, ವೀಣಾ ಮಹಾಂತೇಶ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.