ಹೊಸಪೇಟೆ(ವಿಜಯನಗರ): ‘ವಾಟ್ಸ್ಯಾಪ್ ಸಂಸ್ಕೃತಿ ಯುವಜನತೆಯನ್ನು ನಾಶಗೊಳಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಯುವಜನತೆ ಬೌದ್ಧಿಕತೆ ಹೆಚ್ಚಿಸುವತ್ತ ಗಮನಹರಿಸಬೇಕು’ ಎಂದು ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ ತಿಳಿಸಿದರು.
‘ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಜೇಶನ್’ನಿಂದ (ಎಐಡಿವೈಒ) ಗುರುವಾರ ನಗರದ ರೈತಭವನದಲ್ಲಿ ಏರ್ಪಡಿಸಿದ್ದ ಪ್ರಥಮ ಜಿಲ್ಲಾಮಟ್ಟದ ಯುವಜನ ಸಮ್ಮೇಳನದಲ್ಲಿ ಮಾತನಾಡಿದರು.
‘ಯುವಜನತೆ ಪ್ರಾಮಾಣಿಕತೆ, ನೈತಿಕತೆ ಹಾಗೂ ಬೌದ್ಧಿಕತೆ ಹೆಚ್ಚಿಸಿಕೊಳ್ಳುವ ಮೂಲಕ ದೇಶಕ್ಕೆ ಕೊಡುಗೆ ನೀಡಬೇಕು. ಈ ನಿಟ್ಟಿನಲ್ಲಿ ಯುವಜನರಿಗೆ ಸಮ್ಮೇಳನಗಳು ಅವಶ್ಯಕ. ಯುವಜನತೆ ವಿದ್ಯಾವಂತರಾಗಿ ಸರ್ಕಾರಿ ವಲಯಗಳಲ್ಲಿ ಖಾಲಿ ಹುದ್ದೆಗಳ ಮಾಹಿತಿಯ ಅರಿವು ಹೊಂದುವುದು ಅವಶ್ಯಕ. ಜಾಗತೀಕರಣ, ಖಾಸಗೀಕರಣ ಪ್ರಭಾವದಿಂದ ಸರ್ಕಾರ ತನ್ನ ರಾಜಕೀಯ ಇಚ್ಛಾಶಕ್ತಿ ಕಳೆದುಕೊಂಡಿದೆ. ಸರ್ಕಾರವನ್ನು ಎಚ್ಚರಿಸುವ ಸಲುವಾಗಿ ಯುವಜನತೆ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತು ಪ್ರಶ್ನಿಸುವುದನ್ನು ಕಲಿಯಬೇಕು’ ಎಂದರು.
ಎಐಡಿವೈಒ ರಾಜ್ಯ ಘಟಕದ ಉಪಾಧ್ಯಕ್ಷ ರಾಧಾಕೃಷ್ಣ ಉಪಾಧ್ಯಾಯ ಮಾತನಾಡಿ, ‘ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ನಮ್ಮಲ್ಲೇ ಒಡಕು ಉಂಟಾಗುವ ಸನ್ನಿವೇಶ ಎದುರಾಗಿದೆ. ಇದರ ಹಿಂದಿನ ಕಾರಣವನ್ನು ದೇಶದ ಯುವಜನತೆ ಅರ್ಥೈಸಿ ಕೊಳ್ಳಬೇಕು. ಯುವಜನರು ವಿದ್ಯಾಭ್ಯಾಸದಿಂದ ಜ್ಞಾನವನ್ನು ಹೊಂದಬೇಕು’ ಎಂದು ಹೇಳಿದರು.
ಎಐಡಿವೈಒ ರಾಜ್ಯ ಘಟಕದ ಸದಸ್ಯ ಶರಣಪ್ಪ, ಜಿಲ್ಲಾ ಘಟಕದ ಸದಸ್ಯರಾದ ಎನ್.ಎಲ್.ಪಂಪಾಪತಿ, ಯರ್ರಿಸ್ವಾಮಿ, ಶಿವಮ್ಮ, ಮಂಜುಳಾ, ಕಲ್ಮೇಶ, ಚಿರಂಜೀವಿ, ಅಭಿಷೇಕ್ ಇದ್ದರು.
ಸಮ್ಮೇಳನದಲ್ಲಿ ಎಐಡಿವೈಒ ಸಂಘದ ಜಿಲ್ಲಾ ನೂತನ ಸಮಿತಿಯನ್ನು ರಚಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಬಡಿಗೇರ್, ಉಪಾಧ್ಯಕ್ಷ– ಎಚ್.ಯರ್ರಿಸ್ವಾಮಿ, ಕಾರ್ಯದರ್ಶಿಯಾಗಿ ಪಂಪಾಪತಿ ಎನ್.ಎಲ್. ಅವರನ್ನು ನೇಮಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.