ADVERTISEMENT

ಏಪ್ರಿಲ್‌ಗೆ ಅಂಬೇಡ್ಕರ್‌ ಭವನ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:13 IST
Last Updated 2 ಜನವರಿ 2014, 6:13 IST

ಸಿಂದಗಿ: ಈ ಭಾಗದ ಜನರ ಬಹು ದಿನಗಳ ಬೇಡಿಕೆಯಾಗಿದ್ದ ಡಾ.ಬಿ.ಆರ್.­ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ಆದರೆ ಈಗ ಅದರ ಕಾಮಗಾರಿ ಅತ್ಯಂತ ಸಮರೋಪಾದಿಯಲ್ಲಿ ನಡೆದಿದೆ. ಈ ಭವನವನ್ನು ಏಪ್ರಿಲ್ ತಿಂಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಬುಧವಾರ ನಗರದಲ್ಲಿನ ಅಂಬೇ­ಡ್ಕರ್ ಭವನವನ್ನು ವೀಕ್ಷಣೆ ಮಾಡಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿ, ಈ ಭವನ ನಿರ್ಮಾ­ಣಕ್ಕಾಗಿ ಬಿಜೆಪಿ ಸರ್ಕಾರ ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿತ್ತು. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಬಾಬು ಜಗಜೀವನರಾಮ್‌ ಭವನಕ್ಕಾಗಿ ಸರ್ಕಾರ ಸಂಪೂರ್ಣ ಅನುದಾನ ಬಿಡುಗಡೆ ಮಾಡಿದೆ. ಈ ಭವನ ಕೂಡ ಅಂಬೇಡ್ಕರ್ ಭವನ ಮಾದರಿಯಲ್ಲಿಯೇ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದರು.

ನಗರದಲ್ಲಿ ಜನರಿಗೆ ಅಗತ್ಯವಾಗಿರುವ ನಾಗರಿಕ ಸೌಲಭ್ಯಗಳನ್ನು ಒದಗಿಸಿ­ಕೊಡಲು ಶ್ರಮಿಸಲಾಗುತ್ತಿದೆ. ಅಲ್ಪಸಂಖ್ಯಾತರ 50 ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ನಿರ್ಮಾಣಕ್ಕಾಗಿ  ಮಂಜೂರಾತಿ ದೊರಕಿ ` 2.50 ಕೋಟಿ ಅನುದಾನದಲ್ಲಿ ಈಗ ` 50 ಲಕ್ಷ ಬಿಡುಗಡೆಗೊಂಡಿದೆ ಎಂದರು.

ಪುರಸಭೆ ಸದಸ್ಯ, ಅಂಬೇಡ್ಕರ್ ಭವನ ನಿರ್ಮಾಣದ ರೂವಾರಿ ರಾಜಶೇಖರ ಕೂಚಬಾಳ ಮಾತನಾಡಿ, ಶಾಸಕ ರಮೇಶ ಭೂಸನೂರ ದಲಿತರ ಏಳ್ಗೆಗಾಗಿ ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡುವ ಮೂಲಕ ಸಹಕರಿಸಿದ್ದಾರೆ. ಅವರಿಗೆ ದಲಿತ ಬಂಧುಗಳ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಕೋರೆಗಾಂವ ವಿಜಯೋತ್ಸವ: ಇದೇ ಸಂದರ್ಭದಲ್ಲಿ ದಲಿತ ಮುಖಂಡರು ಅಂಬೇಡ್ಕರ್ ವಾಚನಾಲಯದಲ್ಲಿ ಭೀಮ ಕೋರೆಗಾಂವ ವಿಜಯೋತ್ಸವ ಸರಳ ಕಾರ್ಯಕ್ರಮ ನಡೆಸಿದರು. ಬಿಜೆಪಿ ಎಸ್ ಸಿ ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಶ್ರೀಕಾಂತ ಸೋಮಜಾಳ, ಸಂತೋಷ ಮಣಿಗಿರಿ, ಪರುಶರಾಮ ಕೂಚಬಾಳ, ಮಲ್ಲೂ ಕೂಚಬಾಳ, ರಮೇಶ ಬಿಸನಾಳ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.