ADVERTISEMENT

ಕಬ್ಬಿಗೆ ಸೂಕ್ತ ಬೆಲೆ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:44 IST
Last Updated 7 ಸೆಪ್ಟೆಂಬರ್ 2013, 5:44 IST

ಸಿಂದಗಿ: ವಿಜಾಪುರ ಜಿಲ್ಲೆಯಲ್ಲಿ ರೈತರು ಬೆಳೆದ ಕಬ್ಬು ಬೆಳೆಗೆ ಸಕ್ಕರೆ ಕಾರ್ಖಾನೆ ಗಳು ಸೂಕ್ತ ಬೆಲೆ ನೀಡಿದೇ ಅನ್ಯಾಯ ಮಾಡುತ್ತಿವೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಶುಕ್ರವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ರಂಜಣಗಿ ಮಾತನಾಡಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆ ಗಳು ಪ್ರತಿ ಟನ್ ಕಬ್ಬಿಗೆ ರೂ2500 ನೀಡುತ್ತಿವೆ. ಆದರೆ ಸಿಂದಗಿ- ಇಂಡಿ- ಜೇವರ್ಗಿ ಹಾಗೂ ಅಫಜಲಪೂರ ತಾಲ್ಲೂಕಿನ ಕಾರ್ಖಾನೆಗಳು ರೂ 2300 ಮಾತ್ರ ನೀಡುತ್ತಿವೆ.

ಈ ಹಿಂದೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಇಂಡಿ ಉಪವಿಭಾಗಾಧಿಕಾರಿಗಳು ಕರೆದ ಸಭೆಯಲ್ಲಿ ಪ್ರತಿ ಟನ್ ಕಬ್ಬಿಗೆ ರೂ 3000 ಬೆಲೆ ನೀಡುವಂತೆ ಆದೇಶ ಹೊರಡಿಸಿದ್ದರೂ ಕಾರ್ಖಾನೆ ಮಾಲಿಕರು ಕ್ಯಾರೆ ಎನ್ನದೇ ರೂ 2300 ಮಾತ್ರ ನೀಡುತ್ತಿದ್ದಾರೆ.

ಶಾಸಕ ರಮೇಶ ಭೂಸನೂರ ಚುನಾ ವಣೆ ಪೂರ್ವದಲ್ಲಿ ಕಬ್ಬಿಗೆ ಬೆಂಬಲ ಬೆಲೆ ನೀಡುತ್ತಿಲ್ಲ. ರೈತರು ಬೆಳೆದ ಕಬ್ಬು ಬೆಳೆಗೆ ಸೂಕ್ತ ಬೆಲೆ ನೀಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಆದೇಶ ನೀಡಲು ಏಳು ದಿನಗಳ ಗಡುವು ನೀಡ ಲಾಗುವುದು. ಅಷ್ಟಾದರೂ ಸೂಕ್ತ ಬೆಲೆ ನೀಡುವ ಆದೇಶ ಹೊರ ಬರದಿದ್ದರೆ ತಹ ಶೀಲ್ದಾರ ಕಚೇರಿ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು. ಈಗ ಅದೇ ಭೂಸನೂರ ಪುನ: 2ನೇ ಬಾರಿಗೆ ಶಾಸಕರಾಗಿ ಆಯ್ಕೆ ಗೊಂಡ ಮೇಲೆ ತಾವು ಮಾತನಾಡಿದ ಮಾತನ್ನು ಮರೆತು ಹಾಯಾಗಿದ್ದಾರೆ ಎಂದು ಟೀಕಿಸಿದರು.

ಈ ಕುರಿತು ರೈತ ಸಂಘ ಜಿಲ್ಲಾಧಿಕಾರಿ ಗಳಿಗೆ ಏಳು ದಿನಗಳ ಗಡುವು ನೀಡು ತ್ತದೆ. ಬೇಡಿಕೆ ಈಡೇರದೇ ಇದ್ದಲ್ಲಿ ಮುಂದಾಗುವ ಅನಾಹುತಗಳಿಗೆ ತಾವೇ ಹೊಣೆಗಾರರಾಗುತ್ತೀರಿ ಎಂದು ಬೆದರಿಕೆ ಹಾಕಿದರು.

ಸಿಂದಗಿ ತಾಲ್ಲೂಕಿನಲ್ಲಿ ಮಳೆ ಇಲ್ಲದೇ ಬರದ ಛಾಯೆ ಆವರಿಸಿದೆ. ಹೀಗಾಗಿ ಕೂಡಲೇ ಸಿಂದಗಿ ತಾಲ್ಲೂಕನ್ನು ಬರ ಗಾಲ ಪ್ರದೇಶ ಎಂದು ಘೋಷಣೆ ಮಾಡಬೇಕು. ಈ ಕುರಿತು ರೈತ ಸಂಘ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರೊಂದಿಗೆ ಚರ್ಚಿಸಲಾಗು ವುದು ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಶರಣಪ್ಪಗೌಡ ಬಿರಾದಾರ, ಚನ್ನಪ್ಪಗೌಡ ಪಾಟೀಲ, ಪರಶುರಾಮ ಹುಡೇದ, ಬಸನಗೌಡ ಧರ್ಮಗೊಂಡ, ಗೊಲ್ಲಾಳಪ್ಪ ಚೌಧರಿ, ಬೂತಾಳಿ ಪೂಜಾರಿ, ಶ್ಯಾಮರಾವ ಹತ್ತರಕಿ, ಕುಮಾರ ಹಿರೇಮಠ, ಸೋಮಶೇಖರ ಠಿಂಗಳೆ, ಭೀಮರಾಯ ಕಲಕೇರಿ, ಬಸವರಾಜ ಶಿವಲಿಂಗಪ್ಪ ಗೌಡ ಬಿರಾದಾರ ಪಾಲ್ಗೊಂಡಿದ್ದರು.

ತಹಶೀಲ್ದಾರ್ ಅಶ್ವತ್ಥನಾರಾಯಣ ಶಾಸ್ತ್ರೀ ರೈತರಿಂದ ಮನವಿ ಪತ್ರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.