ADVERTISEMENT

ಕಾಂಗ್ರೆಸ್ ರಾವಣರ ಅಟ್ಟಹಾಸ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 6:35 IST
Last Updated 7 ಜೂನ್ 2011, 6:35 IST
ಕಾಂಗ್ರೆಸ್ ರಾವಣರ ಅಟ್ಟಹಾಸ
ಕಾಂಗ್ರೆಸ್ ರಾವಣರ ಅಟ್ಟಹಾಸ   

ಸಿಂದಗಿ: ನವದೆಹಲಿಯ ಪವಿತ್ರ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾವಣರು ಅಟ್ಟಹಾಸ ಮೆರೆಯುವ ಮೂಲಕ ಬಾಬಾ ರಾಮದೇವ್ ಹಾಗೂ ಸಾವಿರಾರು ಬಾಬಾ ಅನುಯಾಯಿಗಳ ಮೇಲೆ ದೌರ್ಜನ್ಯ ನಡೆಸುವ ಮೂಲಕ ಗೂಂಡಾ ಪ್ರವೃತ್ತಿಯನ್ನು ಪ್ರದರ್ಶಿಸಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಸೋಮವಾರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಯೋಗ ಗುರು ಬಾಬಾ ರಾಮದೇವ್ ಅವರ ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಬೆಂಬಲಿಸಿ ನಡೆಸಿದ ಮೂರನೇ ದಿನದ ಧರಣಿ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರದ ಪ್ರಧಾನಿ ಕಾರ್ಯಾಲಯವನ್ನೊಳಗೊಂಡು ಬಹುತೇಕ ಸಚಿವರುಗಳು ಹಗರಣಗಳು, ಭ್ರಷ್ಟಾಚಾರದ ಕರಿ ನೆರಳಲ್ಲಿ ಸಿಕ್ಕಿಕೊಂಡಿದ್ದಾರೆ. ಇಂಥ ಭ್ರಷ್ಟರ ವಿರುದ್ಧ ಹೋರಾಟಕ್ಕೆ ಕಂಕಣಬದ್ಧರಾಗಿರುವ ಬಾಬಾ ಹಾಗೂ ಅಮಾಯಕ ಮಕ್ಕಳು, ಮಹಿಳೆಯರ ಮೇಲೆ ನಡೆಸಿರುವ ದೌರ್ಜನ್ಯ ತುರ್ತು ಪರಿಸ್ಥಿತಿಗಿಂತಲೂ ಭಯಾನಕವಾಗಿದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಪ್ರತಿಯೊಬ್ಬ ರಾಜಕಾರಣಿಗಳು ಭ್ರಷ್ಟಾಚಾರ ನಿಗ್ರಹ ಕುರಿತಾಗಿ ಸ್ವ ಆತ್ಮ ವಿಮರ್ಶೆ, ಆತ್ಮಾವಲೋಕನ ಮಾಡಿಕೊಳ್ಳುವ ಪರ್ವ ಕಾಲ ಇದಾಗಿದೆ. ತನ್ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಸಾಧ್ಯ ಎಂದು ತಿಳಿಸಿದರು.

ಚಂದ್ರಶೇಖರ ನಾಗೂರ, ಎಂ.ಎಸ್.ಮಠ, ರಾಜಶೇಖರ ಪೂಜಾರಿ, ಎಂ.ಎನ್.ಕಿರಣರಾಜ್, ಅಮೋಘಸಿದ್ದ ಸಾತಿಹಾಳ, ಪ್ರದೀಪ ದೇಶಪಾಂಡೆ, ಸಿದ್ದಣ್ಣ ಚೌಧರಿ ಕನ್ನೊಳ್ಳಿ, ಸಿದ್ದು ಬುಳ್ಳಾ, ಪ್ರವೀಣ ಕಂಟಿಗೊಂಡ, ಸಿದ್ದನಗೌಡ ಪಾಟೀಲ ಬೋರಗಿ, ಶ್ರೀಶೈಲಗೌಡ ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.