ADVERTISEMENT

ಕಾರು ಅಪಘಾತ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 6:36 IST
Last Updated 16 ಜುಲೈ 2013, 6:36 IST

ಮುದ್ದೇಬಿಹಾಳ: ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯಿರುವ ರಾಂಪೂರ ಲಾಜ್ ಬಳಿ ಸೋಮವಾರ ಮಧ್ಯಾಹ್ನ  ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಕಾರು ಡಿಕ್ಕಿ ಹೊಡೆದು ಅದರ ಚಾಲಕ ಹಾಗೂ ಆತ ಇಬ್ಬರಿಗೆ ಅಪಘಾತ ಮಾಡಿದ ಸುದ್ದಿಗಿಂತ ಐಷಾರಾಮಿ ಕಾರು ಇಷ್ಟು ಲಕ್ಷದ್ದು, ಕಾರನ್ನು ರಿಮೋಟ್ ಮೂಲಕ ನಿಯಂತ್ರಿಸಲಾಗುತ್ತಿತ್ತು, ಕಾರಿನ ಚಾಲನ ಹೊಸಬ ಆತನಿಗೆ ಚಾಲನೆ ಗೊತ್ತಿಲ್ಲದೇ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಇತ್ಯಾದಿ. ಮಧ್ಯಾಹ್ನವೇ ಅಪಘಾತವಾದರೂ ಸಂಜೆ 8 ಗಂಟೆಯವೆರೆಗೆ ಯಾರೊಬ್ಬರೂ ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿಲ್ಲ.
 
ಬಳವಾಟ ವಕೀಲರಿಗೆ ಸೇರಿದ್ದು ಎನ್ನಲಾದ ಕಪ್ಪು ಬಣ್ಣದ ಫೋರ್ಡ ಫಿಗೋ ಕಾರು ತಾಳಿಕೋಟಿ ರಸ್ತೆಯಿಂದ ವೇಗವಾಗಿ ಬಂದು ಅಂಬೇಡ್ಕರ್ ವೃತ್ತದಲ್ಲಿ ಹೊರಳುವಾಗ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ತುಂಬೆಲ್ಲಾ ಓಡಾಡತೊಡಗಿತು. ಮಂಗಳೂರಿನಿಂದ ಬಂದಿದ್ದ ಶಾಂತಿ ಪ್ರಕಾಶನದ ಸಂಚಾರಿ ಗ್ರಂಥಾಲಯದ ವಾಹನಕ್ಕೆ ಡಿಕ್ಕಿ ಹೊಡೆಯವುದನ್ನು ತಪ್ಪಿಸಲು ಹೋಗಿ  ಮುಂದೆ ಬಂದ ಬೈಕ್ ಒಂದಕ್ಕೆ ಡಿಕ್ಕಿ ಹೊಡೆಯಿತು.

ಬೈಕ್ ಚಲಾಯಿಸುತ್ತಿದ್ದ ವ್ಯಕ್ತಿ ಬೈಕ್‌ನಿಂದ ನೆಗೆದು ನೆಲಕ್ಕೆ ಬಿದ್ದು ಸ್ವಲ್ಪವೇ ಗಾಯಗೊಂಡು ದುರಂತದಿಂದ ತಪ್ಪಿಸಿಕೊಂಡರು. ನಂತರ ವೃತ್ತದ ಪಕ್ಕದಲ್ಲಿಯೇ ಇರುವ ರಾಂಪೂರ ಲಾಜ್ ಮುಂದೆ ನಿಲ್ಲಿಸಿದ್ದ ರಾಮನಗೌಡ ಶಿವನಗೌಡ ಬಿರಾದಾರ (ರ‌್ಯಾಂಬೋ ಗೌಡರ) ಕಾರಿಗೆ ಡಿಕ್ಕಿ ಹೊಡೆದು ಫಲ್ಟಿ ಹೊಡೆದ ನಂತರ ಅದರ ಅರ್ಭಟ ನಿಂತಿದೆ.

ಕಾರಿನ ಹುಚ್ಚಾಟ ಕಣ್ಣಾರೆ ಕಂಡ ಸಾರ್ವಜನಿಕರು ಜೀವಭಯದಿಂದ ಚಲ್ಲಾಪಿಲ್ಲಿಯಾಗಿ ಓಟಕಿತ್ತಿ ಕಾರಿನ ಹೊಡೆತದಿಂದ ತಪ್ಪಿಸಿಕೊಂಡರು. ಕಾರು ಪಲ್ಟಿಯಾಗಿ ಬೀಳುತ್ತಿದ್ದಂತೆಯೇ ಕಾರಿನ ಸಮೀಪ ಓಡಿಬಂದ ಸಾರ್ವಜನಿಕರು ಗಾಯಗೊಂಡಿದ್ದ ಕಾರ್ ಚಾಲಕ ಹಾಗೂ ಗಾಯಗೊಂಡಿದ್ದ ಬೈಕ್ ಸವಾರನನ್ನು 108 ತುರ್ತು ವಾಹನದ ಮೂಲಕ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದರು.

ಒಟ್ಟಾರೆ ಸಿನಿಮಾಗಳಲ್ಲಿ ನೋಡುತ್ತಿದ್ದ ಘಟನೆ ತಮ್ಮ ಕಣ್ಣೆದುರಿಗೇ ನಡೆದದ್ದು ಸಾರ್ವಜನಿಕರಲ್ಲಿ ಕೆಲ ಕ್ಷಣ ಆತಂಕ ಮೂಡಿಸಿ ಜೀವಭಯ ಹುಟ್ಟುವಂತೆ ಮಾಡಿತು. ದಿನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಸಾವಿರಾರು ಯುವಕರು ಕಾರ್ ಬಿದ್ದದ್ದನ್ನು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿಕೊಳ್ಳುವ ಕೆಲಸ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.