ADVERTISEMENT

ಗಂಗಾಧರ ಮಹಾರಾಜರ ಜಾತ್ರೆಗೆ ಭಕ್ತರ ಮಹಾಪೂರ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 5:40 IST
Last Updated 16 ಜನವರಿ 2012, 5:40 IST

ಆಲಮೇಲ: ಇಲ್ಲಿಗೆ ಸಮೀಪದ ಆಹೇರಿ ಗ್ರಾಮದ ಗಂಗಾಧರ ಮಹಾರಾಜರ ಜಾತ್ರೆ ಭಾನುವಾರ ಜರುಗಿತು.
 ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಹಾಗೂ ನೆರೆಯ ಮಹಾರಾಷ್ಟ್ರದಿಂದ ಸಹಸ್ರಾರು ಜನ ಭಕ್ತರು ಆಗಮಿಸಿ ದ್ದರು. ಇಲ್ಲಿಯ ವಿಶೇಷವೆಂದರೆ ಬಂದ ಭಕ್ತರು ಸಜ್ಜೆರೊಟ್ಟಿ, ವಿವಿಧ ತರಕಾರಿ ಮತ್ತು ಕಾಳುಧಾನ್ಯದಿಂದ ಮಾಡಿದ ಪಲ್ಯ ದಾಸೋಹದಲ್ಲಿ ನೀಡಲಾಗುತ್ತದೆ. ಇದನ್ನು ರೊಟ್ಟಿ ಜಾತ್ರೆಯೆಂದೇ ಪ್ರಸಿದ್ಧಿಯಾಗಿದೆ.

ಪುಟ್ಟಹಳ್ಳಿ ಆಹೇರಿಯಲ್ಲಿ ಎಲ್ಲ ಧರ್ಮಿಯರೂ ಸೇರಿ ಒಂದಾಗಿ ಈ ಜಾತ್ರೆ ಆಚರಿಸುತ್ತಾರೆ. ಪ್ರತಿ ಮನೆಯಿಂದ ರೊಟ್ಟಿಗಳನ್ನು ಸಂಗ್ರಹಿಸಲಾಗುತ್ತದೆ. ಈ ಸಲ 102 ಬೃಹತ್ ಹಂಡೆಗಳಲ್ಲಿ ವಿಶೇಷವಾಗಿ ಬಜ್ಜಿ ಪಲ್ಯ ತಯಾರಿಸಲಾಗಿತ್ತು. ದರ್ಶನಕ್ಕೆ ಬರುವ ಪ್ರತಿಯೊಬ್ಬ ಭಕ್ತರು ಇಲ್ಲಿ ಪ್ರಸಾದ ಸ್ವೀಕರಿಯೇ ಹೋಗುತ್ತಾರೆ.

ಒಂದು ಲಕ್ಷ್ಯ ರೊಟ್ಟಿ ಮತ್ತು 102 ಹಂಡೆಗಳಲ್ಲಿ ತಯಾರಿಸಿದ ಪಲ್ಯ (ವಿವಿಧ ತರಕಾರಿ ತಪ್ಪಲು, ಉಸುಳಿ, ಬಟಾಣಿ ಮುಂತಾದ ಧಾನ್ಯಗಳಿಂದ)  ಊಟವನ್ನು ಜನರು ತಂಡೋಪ ತಂಡವಾಗಿ ಅಲ್ಲಲ್ಲಿ ಕುಳಿತು ಉಣ್ಣುತ್ತಿದ್ದ ದೃಶ್ಯ ಎಲ್ಲಡೆ ಕಂಡು ಬಂತು.

ಶಾಸಕ ರಮೇಶ ಭೂಸನೂರ ಮೊದಲಾದ ಜನ ಪ್ರತಿನಿಧಿಗಳು ಜಾತ್ರೆಗೆ ಆಗಮಿಸಿ ಸಾಮನ್ಯ ಪಂಥಿಯಲ್ಲಿ  ಪ್ರಸಾದ ಸವಿದದ್ದು ವಿಶೇಷವಾಗಿತ್ತು.

ಬೆಳಿಗ್ಗೆ ಪುರವಂತರು ತಮ್ಮ ಸೇವಾ ಕಾರ್ಯ ನಡೆಸಿಕೊಟ್ಟರು. ಮಧ್ಯಾಹ್ನ ಭಕ್ತರು, ಪುರವಂತರು ಅಗ್ನಿ ಪ್ರವೇಶ ಮಾಡಿದರು.

ಕೆಂಡದಲ್ಲಿ ಹಾಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ತಿರಿಸಿದರು. ನಂತರ ಹೇಳಿಕೆಗಳು ನಡೆದವು. ಚರಗ ಚೆಲ್ಲುವ ಮೂಲಕ ಸಂಕ್ರಾಂತಿ ಸುಗ್ಗಿ ಎದ್ದು ಕಾಣುತ್ತಿತ್ತು.

ಪ್ರತಿ ವರ್ಷವೂ ಈ ಜಾತ್ರೆಗೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಾ ಬಂದಿದೆ. ಕಳೆದ ಸಲಕ್ಕಿಂತ ಹೆಚ್ಚು ಭಕ್ತರು ಆಗಮಿಸಿ ಎಲ್ಲಡೆ ಜನ ತುಂಬಿತುಳುಕಿತ್ತು. ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದು ಬಂದೂಬಸ್ತ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.