ಇಂಡಿ: ಶೈಕ್ಷಣಿಕ ಪ್ರಗತಿಯಿಂದ ಮಾತ್ರ ದೇಶದ ಅಭಿವೃಧ್ಧಿ ಸಾಧ್ಯ ಎಂದು ಕೊಳ್ಳೇಗಾಲದ ಕುಮಾರ ನಿಜಗುಣ ಶಿವಾಚಾರ್ಯರು ಅಭಿಪ್ರಾಯಪಟ್ಟರು. ಇಂಡಿ ಪಟ್ಟಣದ ಹಂಜಗಿ ಅವರ ತೋಟದ ಆವರಣದಲ್ಲಿ ಶ್ರೀ ಶಾಂತೇಶ್ವರ ಜ್ಞಾನ ದಾಸೋಹ ಸಮಿತಿಯು ಬುಧವಾರ ಏರ್ಪಡಿಸಿದ್ದ ಶಿಕ್ಷಕರೊಂದಿ ಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಥಮಿಕ ಶಾಲಾ ಮಕ್ಕಳಿಗೆ ಶಿಕ್ಷಕರು ಹೇಳಿದ್ದೇ ಸತ್ಯ ಎಂಬ ಭಾವನೆ ಅವರ ಮನಸ್ಸಿನಲ್ಲಿ ಸಂಪೂರ್ಣ ಅಚ್ಚೊತ್ತುತ್ತದೆ. ಅದನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಇತ್ತೀಚಿಗೆ ನಮ್ಮ ರಾಜ್ಯದ ಪ್ರಾಥ ಮಿಕ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಬಹಳಷ್ಟು ಮಕ್ಕಳು 8ನೇ ತರಗತಿಗೆ ಬಂದರೂ ಅವರಿಗೆ ಕನ್ನಡ ಅಕ್ಷರದ ಜ್ಞಾನ ಗೊತ್ತಿಲ್ಲ. ಪಾಲಕರ ವ್ಯಾಮೋಹ ಕಾನ್ವೆಂಟ್ ಶಾಲೆಗಳತ್ತ ತಿರುಗಿದೆ. ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಕೆಲವೆಡೆ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುವ ಪರಿಸ್ಥಿತಿ ಬಂದೊದಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಕರೆ ನೀಡಿದ ಅವರು ಛಂದಸ್ಸು, ಭಾವ, ಲಯಗಳ ಕುರಿತು ಉಪನ್ಯಾಸ ಮಾಡಿದರು. ಕಿರುತೆರೆಯ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ ಹಾಸ್ಯದ ಹೊನಲು ಹರಿಸಿ ದರು. ಸಿದ್ಧಾರಾಮ ಶರಣರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು, ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಎನ್.ಜಿ. ಕರೂರ ಉಪಸ್ಥಿತರಿದ್ದರು. ಪ್ರಾಥಮಿಕ, ಪ್ರೌಢ ಮತ್ತು ಕಾಲೇಜಿನ ಉಪನ್ಯಾಸಕರು ಭಾಗವಹಿಸಿದ್ದರು. ಪ್ರೊ.ಎ.ಎಸ್. ಗಾಣಿಗೇರ ಮಧುರಚೆನ್ನರ ಗೀತೆ ಹಾಡಿದರು. ಡಾ, ಎಸ್.ಕೆ.ಕೊಪ್ಪಾ ಸ್ವಾಗತಿಸಿದರು. ಪ್ರೊ,ಸಿದ್ಧಲಿಂಗ ಹಂಜಗಿ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.