ಚಡಚಣ: ಸಂಗಮೇಶ್ವರ ಜಾನುವಾರು ಜಾತ್ರೆಯು ಸೋಮವಾರ ವಿಧ್ಯುಕ್ತ ವಾಗಿ ಆರಂಭವಾಯಿತು. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಂಡಿ-ಸಿಂದಗಿ ಹಾಗೂ ಸಂಗಮೇಶ್ವರ ಸಂಸ್ಥೆ, ಚಡಚಣ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಚಾತ್ರೆ ಆರಂಭವಾಗಿದೆ.
ಸೋಮವಾರ ಬೆಳಿಗ್ಗೆ ವೀರಭದ್ರೇಶ್ವರ ದೇವರಗುಡಿಯಿಂದ ಪಲ್ಲಕಿ ಮೆರವಣಿಗೆ ನಡೆಯಿತು. ಮಂಗಳವಾರ ಸಂಜೆ ಮತ್ತೆ ವೀರಭದ್ರೇಶ್ವರ ದೇವಾಲಯದಿಂದ ಪಲ್ಲಕ್ಕಿ ನಂದಿ ಧ್ವಜಗಳ ಮೆರವಣಿಗೆ ಜರುಗಲಿದೆ. ಮಂದಿರದ ಹಿಂಭಾಗದಲ್ಲಿ ಸಿಡಿಮದ್ದು ಪ್ರದರ್ಶನ ನಡೆಯಲಿದೆ.
26 ರಂದು ಸಂಜೆ 4 ಗಂಟೆಗೆ ಜಂಗಿ ನಿಕಾಲಿ ಕುಸ್ತಿ, 27 ರಂದು ಉತ್ತಮ ರಾಸುಗಳ ಆಯ್ಕೆ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಆಕ್ರೋಶ: ಜಾತ್ರೆ ನಡೆಯುವ ಸ್ಥಳದಲ್ಲಿ ಅಗತ್ಯ ಸೌಲಭ್ಯ ಒದಗಿಸಿಲ್ಲ. ಹೀಗಾಗಿ ರೈತರು ಹಾಗೂ ಜಾನುವಾರು ಮಾಲೀಕರು ತೊಂದರೆ ಅನುಭವಿಸುವಂತಾಗಿದೆ ಎಂದು ರೇವತಗಾಂವ ಗ್ರಾಮದ ರೈತ ಸಿವಣ್ಣ ಜಾಬಗೊಂಡೆ, ಸೊರಡಿ ಗ್ರಾಮದ ಮಹಾದೇವ ಬಿರಾದಾರ, ನೀವರಗಿ ಗ್ರಾಮದ ಅಂಬಣ್ಣ ಇಂಗಳೆ,ವಿಠ್ಠಲ ಸಿದ್ದಾಪೂರ ತೀವೃವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೋರಿ ಸಾವು
ಭಾನುವಾರ ಇಲ್ಲಿಗೆ ಆಗಮಿಸಿದ ಮಹಾರಾಷ್ಟ್ರದ ಸೊರಡಿ ಗ್ರಾಮದ ರೈತ ಸಿದಮಲ್ಲಪ್ಪ ನಾಗಪ್ಪ ಬಿರಾದಾರ ಅವರಿಗೆ ಸೇರಿದ ಸುಮಾರು 50 ಸಾವಿರ ಬೆಲೆ ಬಾಳುವ 6 ಹಲ್ಲಿನ ಹೋರಿಯೊಂದು ಸೋಮವಾರ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದೆ.
ಹೋರಿ ಸಾವನ್ನಪ್ಪಿದ್ದರೂ ಎಪಿಎಂಸಿಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿಲ್ಲ. ಹೋರಿ ಕಳೆದುಕೊಂಡ ರೈತನಿಗೆ ಪರಿಹಾರ ನೀಡಬೇಕು ಎಂದು ತಾ.ಪಂ.ಸದಸ್ಯ ಸೂರಯ್ಯ ಮಠಪತಿ ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.