ADVERTISEMENT

ಚಿಂಚೋಳಿ 9, ಐನಾಪೂರ 11 ಸೆಂ.ಮೀ. ಮಳೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 10:10 IST
Last Updated 19 ಜೂನ್ 2012, 10:10 IST

ಚಿಂಚೋಳಿ: ತಾಲ್ಲೂಕಿನಲ್ಲಿ ತಡವಾಗಿ ಆರಂಭವಾದ ಮುಂಗಾರು ಮಳೆ ಕೃಷಿ ಚಟುವಟಿಕೆಗೆ ಇಂಬು ನೀಡಿದೆ.                  ಭಾನುವಾರ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿದಿದ್ದು ಮಳೆಯಿಲ್ಲದೇ           ಕಂಗಾಲಾಗಿದ್ದ ರೈತರ ಪಾಲಿಗೆ ಹರ್ಷದ ಹೊನಲು ಹರಿಸಿದೆ.

ಜೂನ್ ತಿಂಗಳಲ್ಲಿ 15 ಸೆಂ.ಮೀ. ಸರಾಸರಿ ಮಳೆ ಸುರಿಯಬೇಕು. ಈ ಪೈಕಿ ಸರಾಸರಿ ಮಳೆಯ ಪ್ರಮಾಣದ             ಅರ್ಧದಷ್ಟು ಮಳೆ ಒಂದೇ ದಿನ ಬಂದು ಮುಂಗಾರು ಬಿತ್ತನೆಗೆ ದಾರಿ ಸುಗಮ ಗೊಳಿಸಿದೆ.
`ಐನಾಪೂರ ಅತ್ಯಧಿಕ 11 ಸೆಂ.ಮೀ, ಚಿಂಚೋಳಿ 9 ಸೆಂ.ಮೀ, ಸುಲೇಪೇಟ 6 ಸೆಂ.ಮೀ, ಕೊಂಚಾವರಂ 7 ಸೆಂ.ಮೀ, ಕೋಡ್ಲಿ 5 ಸೆಂ.ಮೀ, ಚಿಮ್ಮನಚೋಡ್ 1 ಸೆಂ.ಮೀ  ಮಳೆ ಮಳೆಮಾಪನ ಕೇಂದ್ರಗಳಲ್ಲಿ ದಾಖಲಾಗಿದೆ~ ಎಂದು                   ತಹಶೀಲ್ದಾರ ಡಾ. ರಮೇಶಬಾಬು ಹಾಲು ತಿಳಿಸಿದ್ದಾರೆ.
 
ಮುಂಗಾರು ಆರಂಭದ ಕಾಲದಲ್ಲಿ `ಮಿರ್ಗಾ~ ಮಳೆ ಧರೆಗಿಳಿದು ಪವಾಡ ಮೆರೆದಿದೆ. ಇದರಿಂದ ರೈತರು ಬೀಜ ಪಡೆಯಲು ಇಲ್ಲಿನ ಟಿಎಪಿಸಿಎಂಎಸ್ ಮಳಿಗೆಯಲ್ಲಿ ಮುಗಿಬಿದ್ದಿರುವುದು ಕಂಡು ಬಂದಿತು. ಕಳೆದ ವರ್ಷದ ಆಗಸ್ಟ್ ತಿಂಗಳಿನಿಂದ ಮುನಿಸಿಕೊಂಡಿದ್ದ ವರುಣ, ಈಗ ಧೋ ಎಂದು ನೀರು ಸುರಿದು ಬತ್ತಿ ಹೋಗಿದ್ದ ನಾಲಾ, ನದಿ, ಹಳ್ಳ, ತೊರೆ, ಕೆರೆ ಕುಂಟೆಗಳಗಲ್ಲಿ ನೀರು ತುಂಬಿ ಇಳೆಯನ್ನು ತಂಪಾಗಿಸಿದೆ.

ಕಾರ ಹುಣ್ಣಿಮೆಗೆ ಮುನ್ನವೇ ಬಿತ್ತನೆ ಆರಂಭಿಸುತ್ತಿದ್ದ ರೈತರು ಪ್ರಸಕ್ತ ಮುಂಗಾರಿನಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಬಂದರೂ ಮಳೆಯ ಕೊರತೆಯಿಂದ ಬಿತ್ತನೆ ನಡೆಸಿರಲಿಲ್ಲ. ಈಗ ಒಂದೇ ಮಳೆ, ಅನ್ನದಾತನಲ್ಲಿ ಮುಂಗಾರು  ಆಸೆ ಮೂಡಿಸಿದೆ. ಮಣ್ಣೆತ್ತಿನ  ಅಮಾವಾಸ್ಯೆ ಮರುದಿನದಿಂದ ಮುಂಗಾರು ಬಿತ್ತನೆಗೆ ರೈತರು          ಮುಂದಾಗಲಿದ್ದಾರೆ.

ಸಂಚಾರ ಅಸ್ತವ್ಯಸ್ತ:  ಭಾನುವಾರ ಇಡಿ ರಾತ್ರಿ ಸುರಿದ ಮಳೆ, ಸೋಮವಾರವೂ ಮುಂದುವರಿದ ಜಿಟಿಜಿಟಿ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿತು. ಮಳೆಯಿಂದ ತಾಲ್ಲೂಕಿನ ಚಿಂಚೋಳಿ ಶಾದಿಪೂರ ಮಧ್ಯೆ ಲಾರಿ ಸಿಕ್ಕಿಬಿದ್ದುದರಿಂದ ಚಿಂಚೋಳಿ ಕೊಂಚಾವರಂ ಮಾರ್ಗದ ಸಂಚಾರ ಹಾಗೂ ಚಿಂಚೋಳಿ ಐನೋಳ್ಳಿ ಮಧ್ಯೆ ಗಿಡ ಉರುಳಿ ರಸ್ತೆಗೆ ಬಿದ್ದದರಿಂದ ಚಿಂಚೋಳಿ ಬೀದರ್ ಮಾರ್ಗದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕೋಡ್ಲಿ ಚಿಂಚೋಳಿ ಮಧ್ಯೆ ಅಲ್ಲಲ್ಲಿ 7 ಲಾರಿಗಳು ರಸ್ತೆಯ ಕೆಸರಿನಲ್ಲಿ ಸಿಕ್ಕು ಹಾಕಿಕೊಂಡರೆ, ಚಿಂಚೋಳಿಯ ಚಂದಾಪೂರದಲ್ಲಿ ಬಸ್ಸೊಂದು ರಸ್ತೆಯ ಪಕ್ಕಕ್ಕೆ ಇಳಿದು ಕೆಸರಲ್ಲಿ ಸಿಕ್ಕಿಬಿದ್ದಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.